Friday, December 26, 2008

ಗೋಮ್ಮಟೇಶ


ಬೆಟ್ಟದ ಮೇಲೆ
ನೆಟ್ಟನೆ ನಿಂತಿಹ
ಗೊಮ್ಮಟೇಶನ ನೋಡಣ್ಣ

ಮಂದಹಾಸವ ಬೀರುತ
ನಿಂದಿಹ ಶಾಂತಿಯ
ಮೂರುತಿ ನೋಡಣ್ಣ

ದಿನ ದಿನ ಜನರು
ದರುಶನ ಮಾಡಲು
ಬರುವರಿಲ್ಲಿಗೆ ನೋಡಣ್ಣ

ಮಜ್ಜನ ಮಾಡುವ
ಸಮಯಕೆ ಎಲ್ಲರು
ಹಾಡುತ ನಲಿವರು ನೋಡಣ್ಣ .
(ಕವಿ : ಸುಬ್ರಹ್ಮಣ್ಯ ಭಟ್)
***

ಮಂಗಣ್ಣ


ಮರದಿಂದ ಮರಕೆ
ಹಾರುತ ಬರುವ
ಕೆಂಪನೆ ಮುಖದ ಮಂಗಣ್ಣ
ಸುಲಿದ ಬಾಳೆಯ
ಹಣ್ಣನು ಕೊಡುವೆ
ಬೇಗನೆ ನೀನು ನುಂಗಣ್ಣ

ಹಲ್ಲನು ಕಿರಿಯುತ
ಕಣ್ಣನು ಮಿಟುಕಿಸಿ
ಟಿರಿ ಟಿರಿಗುಟ್ಟುವುದೇಕಣ್ಣ

ಕಾಡಿನ ಮರದಲಿ
ಸಿಗುವ ಹಣ್ಣನು
ತಿನ್ನುತ ನೀನು ಬಾಳಣ್ಣ


***

Wednesday, December 24, 2008

ಸುಗ್ಗಿ ಸಂಭ್ರಮ



ಗದ್ದೆಯ ಬದಿಯ
ತೆಂಗಿನ ಮರದಲಿ
ಗೀಜಗನ ಗೂಡು
ಸೋರೆಯ ಬುರುಡೆ
ಕಟ್ಟಿದ ಹಾಗೆ
ಕಾಣುತಿದೆ ನೋಡು

ಗದ್ದೆಯ ನಡುವೆ
ಕೇಳಿ ಬರುತಿದೆ
ಸುಗ್ಗಿಯಾ ಹಾಡು

ಕೊಯ್ಲನು ಕೊಯ್ದು
ರೈತನ ಮನೆಯ
ಕಣಜವ ನೀ ನೋಡು

ಸುಗ್ಗಿಯು ಬರುತಿರೆ
ಹಿಗ್ಗುತ ಬೇಗನೆ
ಸಿಹಿಯೂಟವ ಮಾಡು

(ಕವಿ : ಸುಬ್ರಹ್ಮಣ್ಯ ಭಟ್ )
***

Tuesday, December 23, 2008

ದುಂಬಿ

ಹಾರುತ ಹಾರುತ
ಹತ್ತಿರ ಬಂದಿತು
ದುಂಬಿಯು ತಾನೊಂದು
ಹೂವಿನ ಮಧುವನು
ಹೀರಲಿಕೆಂದು ತವಕದಿ
ಬಳಿ ಬಂದು
ಅರಳಿದ ಹೂವಿನ
ರಸವನು ಹೀರುತ
ಮೆಲ್ಲನೆ ತಾ ಸವಿದು
ರೆಕ್ಕೆಯ ಬಡಿಯುತ
ಹಾರುತ ಹೋಯಿತು
ಗಗನದ ಕಡೆಗಂದು.
***

Thursday, December 18, 2008

ಗೊಂಬೆ

ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ
ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ
ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ
(ಕವಿ: ಶಾ೦ತಿರಾಂ )
***

Friday, December 12, 2008

ಪದ್ದು

ಅವಳ ಹೆಸರು ಪದ್ದು
ಬುದ್ಧಿಯಿಲ್ಲ ಪೆದ್ದು
ಮನೆಯಲೆಲ್ಲ ಮುದ್ದು
ತಿನ್ನೋದೆಲ್ಲ ಕದ್ದು
ಒಮ್ಮೆ ಸಿಕ್ಕಿ ಬಿದ್ದು
ಬಿತ್ತು ನಾಲ್ಕು ಗುದ್ದು !

***

Thursday, December 11, 2008

ಗುಂಡ

ಉಂಡಾಡಿ ಗುಂಡ
ಮದುವೆ ಮನೆಗೆ ಹೋದ
ಹತ್ತು ಲಾಡು ತಿಂದ
ಹೊಟ್ಟೆ ನೋವು ಅಂದ
ಅಮ್ಮ ಬೆಣ್ಣೆ ಕೊಟ್ಟಳು
ಇನ್ನು ಬೇಕು ಅಂದ
ಅಪ್ಪ ದೊಣ್ಣೆ ತಂದನು
ಕೈ ಕಟ್ ಬಾಯಿ ಮುಚ್ !
***

ಊರ ಜಾತ್ರೆ


ಊರಿನ ತೇರನು
ನೋಡಲಿಕೆ೦ದು
ಜನರೆಲ್ಲರು ಬಂದು

ದೇವರ ಉತ್ಸವ
ಬಲಿಯನು ನೋಡಲು
ಮೌನದಿ ತಾ ನಿಂದು

ಡೋಲು ಗಂಟೆಯು
ವಾದ್ಯವು ಕಹಳೆಯು
ಸದ್ದನು ಮಾಡಿರಲು

ಮಲ್ಲಿಗೆ ಸಂಪಿಗೆ
ಬಗೆ ಬಗೆ ಹೂಗಳ
ಪರಿಮಳ ತುಂಬಿರಲು


ಚೆಂಡೆಯ ಬಡಿದು
ಪಟಾಕಿ ಸಿಡಿದು
ಸಡಗರದಿಂದಿರಲು

ದೇವರ ಹೊತ್ತು
ಬಲಿಯನು ಬರುತಿರೆ
ಭಕ್ತರು ಜಯವೆಂದು

ದೇವರ ರಥದಲಿ
ಕೂರಿಸಿ ತೇರನು
ಎಳೆಯುತ ನಡೆತಂದು

ಹರಿಯುವ ನದಿಯ
ಬದಿಯಲಿ ನಿಲ್ಲಿಸಿ
ಪೂಜೆಯ ಕೈಗೊಂಡು

ದೇವರು ಸ್ನಾನವ
ವಿರಚಿಸೆ ಜಾತ್ರೆಯು
ಕೊನೆಯಾಯಿತು ಅಂದು .

(ಕವಿ :ಸುಬ್ರಹ್ಮಣ್ಯ ಭಟ್ )

***

Wednesday, December 10, 2008

ಪುಟಾಣಿ ಅಳಿಲು


ಅಳಿಲೆ ಅಳಿಲೆ
ಪುಟಾಣಿ ಅಳಿಲೆ
ಹತ್ತಿರ ಬಾರಿಲ್ಲಿ


ಚಿಂವ್ ಚಿಂವ್ ಎನ್ನುತ
ಬಾಲವ ಕುಣಿಸಿ
ಹೊರಟಿಹೆ ನೀನೆಲ್ಲಿ ?


ಹಣ್ಣನು ಕೊಡುವೆ
ಹಾಲನು ನೀಡುವೆ
ಬೇಗನೆ ಬಾರಿಲ್ಲಿ


ಬಾನಲಿ ಕಟ್ಟಿದ
ಕಾಮನ ಬಿಲ್ಲನು
ತೋರುವೆ ನೋಡಲ್ಲಿ


ಪುಟಾಣಿ ಅಳಿಲೆ
ನೀನು ಬಂದರೆ
ಆಡುವ ನಾವಿಲ್ಲಿ


ಅಮ್ಮನು ಕೊಟ್ಟಿಹ
ತಿಂಡಿಯನೆಲ್ಲವ
ಕೊಡುವೆನು ನಿನಗಿಲ್ಲಿ


ನಾನೂ ನೀನೂ
ಕೂಡುತಲೀಗ
ಆಟವನಾಡೋಣ


ಅಮ್ಮನು ಕರೆಯೆ
ನಮ್ಮ ಮನೆಯನು
ಬೇಗನೆ ಸೇರೋಣ

(ಕವಿ : ಸುಬ್ರಹ್ಮಣ್ಯ ಭಟ್ )

***


Tuesday, December 9, 2008

ಮುದ್ದು ಕಂದ...

ಬಾನಿನಲ್ಲಿ ಸೂರ್ಯ ದೇವ
ಮೇಲಕೇರಿ ಬಂದ
ನಿದ್ದೆ ಕಳೆದು ಮೇಲಕೇಳು
ಬಾಲ ಮುದ್ದು ಕಂದ
ಹಕ್ಕಿಗಳ ಇಂಚರವು ಸವಿಯೆ
ಕಿವಿಗೆ ಅಂದ
ಮಂಜಿನ ಹನಿಗಳೆಲ್ಲ
ಹುಲ್ಲ ಮೇಲೆ ಚೆಂದ
ಬೇಗನೆದ್ದು ಮುಖವ ತೊಳೆಯೋ
ಬಾಲ ಮುದ್ದು ಕಂದ
ನಿನ್ನ ಆಟ ಪಾಠವೀಗ
ಮಾಡಬೇಕು ಬೇಗ
ನಿದ್ದೆ ಕಳೆದು ಮೇಲಕೇಳು
ಬಾಲ ಮುದ್ದು ಕಂದ
(ಕವಿ : ಸುಬ್ರಹ್ಮಣ್ಯ ಭಟ್ )
***

Friday, December 5, 2008

ಗಿರಿಗಿಟ್ಟಿ

ಗಿರ ಗಿರ ತಿರುಗುವ ಗಿರಿಗಿಟ್ಟಿ
ಸುರಗಿ ಎಲೆಯ ಗಿರಿಗಿಟ್ಟಿ

ಕಡ್ಡಿಗೆ ಪೋಣಿಸಿ
ಕೈಯಲಿ ಹಿಡಿದು

ಗಾಳಿಗೆ ತಿರುಗುವ ಗಿರಿಗಿಟ್ಟಿ
ಗಿರ ಗಿರ ತಿರುಗುವ ಗಿರಿಗಿಟ್ಟಿ
***

Thursday, December 4, 2008

ಲಗೋರಿ


ಲಗೋರಿ ಆಟವ ಆಡಲು ಬನ್ನಿರಿ
ಗೆಳೆಯರೆ ನೀವೆಲ್ಲ
ಗುಂಪುಗಳೆರಡನು ಮಾಡುತ
ನಾವು ಆಡುವ ಈಗೆಲ್ಲ

ಕಲ್ಲುಗಳೇಳನು ಬೇಗನೆ
ಇರಿಸುತ ಒಂದರಮೇಲೊಂದು
ಗೋರಿಯ ಕಟ್ಟಲು ಚೌಕದೊಳಗೆ
ಆಟವು ಸುರುವಂದು

ಚೆಂಡನು ಹಿಡಿದು ಗುರಿಯನು ಕೆಡೆದು
ಓಡುತ ನಾವಿಂದು
ಜಾಣರಂತೆ ಗೋರಿಯ ಕಟ್ಟಲು
ತಪ್ಪಿಸಿಯಾ ಚೆಂಡು

ಆಟವು ಮುಗಿದುದು ಗೋರಿಯ ಕಟ್ಟಲು
ಲಗೋರಿ ಎಂದೆನುತ
ಹಾರುತ ಆಡುವ ಬನ್ನಿರಿ
ಗೆಳೆಯರೆ ನಾವೀಗಲೆ ಕಲೆತು
(ಕವಿ : ಸುಬ್ರಹ್ಮಣ್ಯ ಭಟ್ )

***

Wednesday, December 3, 2008

ಕಳ್ಳ ಬೆಕ್ಕು


ಮಿಯಾಂವ್ ಮಿಯಾಂವ್ ಮಿಯಾಂವ್
ಎಂದು ಬೆಕ್ಕು ಬಂದಿತು

ಕಳ್ಳ ಹೆಜ್ಜೆ ಇಟ್ಟು
ಅಡುಗೆ ಮನೆಯ ಹೊಕ್ಕಿತು

ಹಾಲ ಪಾತ್ರೆ ಮುಚ್ಚಳನ್ನು
ಕೊಡವಿ ಹಾಕಿತು

ಪಾತ್ರೆಯೊಳಗೆ ತಲೆಯ ಹಾಕಿ
ನೆಕ್ಕ ತೊಡಗಿತು

ಇದನು ತಿಳಿದ ಅಮ್ಮ
ಮೆಲ್ಲ ಕೋಲು ತಂದಳು

ದೂರದಿಂದ ತಿರುಗಿ ನೋಡಿ
ಬೆಕ್ಕು ಓಡಿತು !
(ಕವಿ : ಸುಬ್ರಹ್ಮಣ್ಯ ಭಟ್ )
***

Tuesday, December 2, 2008

ಮಿಂಚುಳ್ಳಿ


ಮಾವಿನ ಮರದ ಟೊ೦ಗೆಯಲಿ
ಮಿಂಚುಳ್ಳಿ ಕುಳಿತಿತ್ತು
ಅತ್ತ ಇತ್ತ ಕೊಂಕಿಸಿ ಕೊರಳ
ಕೆರೆಯನು ನೋಡಿತ್ತು
ಮೇಲಿಂದ ನೀರಿನೊಳಗೆ
ಒಮ್ಮೆಲೇ ಹಾರಿತ್ತು
ಮೇಲಕೆ ಬರುತ ಬಾಯೊಳು
ಒಂದು ಮೀನನು ಕಚ್ಚಿತ್ತು
ಹಾರುತ ಹೋಗಿ ತನ್ನಯ
ಮರಿಗೆ ಗುಟುಕನು ಕೊಟ್ಟಿತ್ತು
ಮೀನನು ತಿಂದು ಮರಿ ಮಿಂಚುಳ್ಳಿ
ಚೀಂವ್ ಚೀಂವ್ ಎಂದಿತ್ತು
(ಕವಿ : ಸುಬ್ರಹ್ಮಣ್ಯ ಭಟ್ )
***

Monday, December 1, 2008

ಚಿಟ್ಟೆ


ಬಣ್ಣದ ಚಿಟ್ಟೆ
ಬಣ್ಣದ ಚಿಟ್ಟೆ
ಬೇಗನೆ ಬಾರಿಲ್ಲಿ


ತರತರ ಬಣ್ಣದ
ಚಿತ್ರವ ನಿನ್ನಲಿ
ಬರೆದವರೀಗೆಲ್ಲಿ ?


ಹೂವಿನ ಎಸಳಲಿ
ಮೊಗ್ಗಿನ ಬದಿಯಲಿ
ಮೆಲ್ಲನೆ ನೀ ಕುಳಿತು


ಹಾರುತ ಹಾರುತ
ಮೇಲಕೆ ಹೋಗುವೆ
ರೆಕ್ಕೆಯ ನೀ ಬಡಿದು


ಬಾ ಬಾ ಚಿಟ್ಟೆ
ನಿನ್ನನು ಮುಟ್ಟಿ
ಅಮ್ಮಗೆ ತೋರುವೆನು


ಕೈಯಲಿ ಮೆತ್ತಿದ
ಬಣ್ಣವ ಕಂಡು
ಪುಳಕವಗೊಳ್ಳುವೆನು !

(ಕವಿ : ಸುಬ್ರಹ್ಮಣ್ಯ ಭಟ್ )

***








Saturday, November 29, 2008

ಟೊಪ್ಪಿ ದಾಸಪ್ಪ

ಟೊಪ್ಪಿಯ ಮಾರುವ ಕೆಲಸವ ಮಾಡಿ
ಹೊಟ್ಟೆಯ ಹೊರೆವನು ದಾಸಪ್ಪ
ಟೊಪ್ಪಿಯ ಮಾರಲು ಪಕ್ಕದ
ಊರಿಗೆ ಸಾಗುತಲಿರಲು ದಾಸಪ್ಪ
ಬಿಸಿಲಿನ ಬೇಗೆಗೆ ಹಸಿವಿನ ತಾಪಕೆ
ಮಾಮರದಡಿಯಲಿ ಕುಳಿತಿರಲು
ಬುತ್ತಿಯ ಬಿಚ್ಚಿ ರೊಟ್ಟಿಯ ತೆಗೆದು
ಹಸಿವನು ನೀಗಿದ ದಾಸಪ್ಪ
ಮಾಮರದಲ್ಲಿ ಮಂಗಗಳೆಲ್ಲ
ಟಿರಿ ಟಿರಿಗುಟ್ಟುತ ಕುಳಿತಿರಲು
ಟೊಪ್ಪಿಯ ದಾಸಪ್ಪನ ಕಂಡು
ಹಲ್ಲನು ಗಿಂಜಿ ಕಿರಿಗುಡಲು
ಊಟದ ಬಳಿಕ ನಿದ್ದೆಯ ಮಾಡಿದ
ಮರದ ಬುಡದಲಿ ದಾಸಪ್ಪ
ಮರವನ್ನು ಇಳಿದು ಮಂಗಗಳೆಲ್ಲ
ಟೋಪಿಯ ಬುಟ್ಟಿಗೆ ಕೈಯಿಟ್ಟು
ಸಿಕ್ಕಿದ ಟೋಪಿಯ ತಲೆಯಲಿ ಇಟ್ಟು
ಮರದಲಿ ಕುಳಿತು ಕೀಯೆನಲು
ಎಚ್ಚರಗೊಂಡು ದಾಸಪ್ಪನು
ಬುಟ್ಟಿಯ ಒಳಗೆ ಕೈಯಿಡಲು
ಟೊಪ್ಪಿಯು ಕಾಣದೆ ಕಂಗಾಲು
ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
(ಕವಿ : ಸುಬ್ರಹ್ಮಣ್ಯ ಭಟ್ )
***

Friday, November 28, 2008

ದೇಶ ಭಕ್ತಿಗೀತೆ

ವಿಶಾಲ ಭಾರತ
ಭವ್ಯ ದಿವ್ಯ ಭಾರತ
ಸಂಸ್ಕೃತಿಯ ನೆಲೆಯು ಭಾರತ


ಪ್ರಕೃತಿ ಸೌ೦ದರ್ಯದಿ
ಜಗದಿ ದಿವದಿ ಮೆರೆಯುವ
ಪುಣ್ಯ ಭೂಮಿ ನಮ್ಮ ಭಾರತ


ಎದ್ದೇಳಿ ವೀರ ಪ್ರಜೆಗಳೇ
ಶಾಂತಿಗಾಗಿ ಮುನ್ನಡೆಯಿರಿ
ಭ್ರಾತೃತ್ವವವನ್ನು ಬೆಳೆಸಿರಿ
ಒಂದಾಗಿ ಕೂಡಿ ಬಾಳಿರಿ


ವಿಶಾಲ ಭಾರತ

ಭವ್ಯ ದಿವ್ಯ ಭಾರತ

ಸಂಸ್ಕೃತಿಯ ನೆಲೆಯು ಭಾರತ

***

Thursday, November 27, 2008

ನಮ್ಮ ಕನ್ನಡ ನಾಡು

ನಮ್ಮ ನಾಡಿದು ನಮ್ಮದು
ನಮ್ಮ ಕನ್ನಡ ನಾಡಿದು
ನೆಮ್ಮದಿಯ ತವರೂರಿದು
ಕಂಗು ಬೆಳೆಯುವ ನಾಡಿದು
ತೆಂಗು ಬೆಳೆಯುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಅರಳು ಮಲ್ಲಿಗೆ ನಾಡಿದು
ಕೆಂಡ ಸಂಪಿಗೆ ನಾಡಿದು
ಕೋಗಿಲೆಯ ತವರೂರಿದು
ಭಾರಿ ಸೊಬಗಿನ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಬತ್ತ ಬೆಳೆಯುವ ನಾಡಿದು
ಮುತ್ತು ಬೆಳೆಯುವ ನಾಡಿದು
ಹೊನ್ನು ಬೆಳೆಯುವ ನಾಡಿದು
ಅನ್ನ ನೀಡುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಹಲವು ಕವಿಗಳ ಬೀಡಿದು
ವೀರ ಶೂರರ ನಾಡಿದು
ನಾವು ಹುಟ್ಟಿದ ನಾಡಿದು
ತಾಯಿ ಹುಟ್ಟಿದ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
(ಕವಿ : ಮ.ಸಂ. ರಾವ್ )
***

Wednesday, November 26, 2008

ಕಿಟ್ಟಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದು ರೊಟ್ಟಿ ತಟ್ಟಪ್ಪ

ಪುಟಾಣಿ ರೊಟ್ಟಿ ಚೆ೦ದಕೆತಟ್ಟಿ
ಅಂಗೈಲಿಟ್ಟು ತಾರಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದು ರೊಟ್ಟಿ ತಟ್ಟಪ್ಪ
***

Tuesday, November 25, 2008

ಕಂದನ ನಗು

ತಣ್ಣನೆ ರಾತ್ರಿಯ ಆಕಾಶದಲಿ
ಚಂದಿರ ನಗುತಿದ್ದ
ಅಮ್ಮನ ಕೂಡೆ ಅಂಗಳದಲ್ಲಿ
ಕಂದನು ಕುಳಿತಿದ್ದ


ಮಲ್ಲಿಗೆ ಹೂವಿನ ಪರಿಮಳ ಮೆಲ್ಲನೆ
ತೇಲುತ ಬರುತಿರಲು
ಮಿಂಚುಹುಳವು ಮಿರಿ ಮಿರಿಗುಟ್ಟುತ
ಬಳ್ಳಿಯ ಬಳಿಯಿರಲು


ಹಚ್ಚಿದ ಹಣತೆಯ ಹಿಡಿಯುತ
ಬಂದಳು ಅಕ್ಕನು ತಾನಾಗಿ
ಪಕ್ಕನೆ ಎಣ್ಣೆಯ ಕುಡಿಕೆಯ
ಮರೆಯಲು ಅಪ್ಪನು ಒಳ ಹೋಗಿ


ದೀಪವನಿರಿಸಲು ತುಳಸಿಯ
ಬುಡದಲಿ ಕೈಜೋಡಿಸಿ ನಿಂತು
ದೇವರ ನೆನೆಯುವ ಪರಿಯನು ಕಂಡು
ಕಂದಗೆ ನಗು ಬಂತು .

(ಕವಿ : ಸುಬ್ರಹ್ಮಣ್ಯ ಭಟ್)

***

Monday, November 24, 2008

ಬಣ್ಣದ ವೇಷ



ಬಣ್ಣದ ಮನೆಗೆ ಅಣ್ಣನ ಕೂಡೆ
ಪುಟ್ಟಣ್ಣನು ಹೋಗಿದ್ದ
ಬಣ್ಣದ ವೇಷವ ಬರೆವುದ ಕಂಡು
ಕಣ್ ಕಣ್ ಬಿಟ್ಟಿದ್ದ
ರಂಗದ ಮೇಲೆ ಭಾಗವತನು
ಹಾಡನು ಹಾಡಿದ್ದ
ಬದಿಯಲಿ ನಿಂತು ಶಂಕರಣ್ಣನು
ಚೆಂಡೆಯ ಬಡಿದಿದ್ದ
ದೂತನು ಬಂದು ನಾಥನ ಮುಂದೆ
ಲಾಗ ಹಾಕಿದ್ದ
ನಾಥನು ಹೋಗಿ ರಕ್ಕಸರೊಂದಿಗೆ
ಸಮರವ ನಡೆಸಿದ್ದ
ಸೋತ ನಾಥನು ಹರಿಯ ಮುಂದೆ
ಕೈ ಜೋಡಿಸಿ ನಿಂತಿದ್ದ
ಅಭಯವನಿತ್ತ ಹರಿ ಬೇಗನೆ ಬಂದು
ಚಕ್ರವ ಬಿಟ್ಟಿದ್ದ
ಭೀತಿಯಿ೦ದ ಓಡಿದ ರಕ್ಕಸ
ಬಣ್ಣದ ಮನೇಲಿದ್ದ
ಮೆಲ್ಲನೆ ವೇಷವ ಕಳಚುತ
ನೋಡಿರೆ ಮಾಲಿಂಗಜ್ಜನಾಗಿದ್ದ !!
(ಕವಿ : ಸುಬ್ರಹ್ಮಣ್ಯ ಭಟ್ )
***

Sunday, November 23, 2008

ರಾಷ್ಟ್ರಧ್ವಜ

ಬಾರಣ್ಣ ನೋಡಣ್ಣ

ಓ ಮುದ್ದು ಚಿಣ್ಣ

ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ

ಮೇಲೆ ಕೇಸರಿ ಬಣ್ಣ

ನಡು ಬಿಳುಪಣ್ಣ

ಕೆಳಗೆ ಹಸಿರು ಬಣ್ಣ

ನಡುವೆ ಚಕ್ರವಣ್ಣ

ಬಾರಣ್ಣ ನೋಡಣ್ಣ
ಓ ಮುದ್ದು ಚಿಣ್ಣ
ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ

Friday, November 21, 2008

ಪುರಿ ಮಾರುವವನು

ಪುರಿಗಳ ಅಂಗಡಿ ನಾಗಣ್ಣ

ಕೊಡು ನಾಕಾರು ಪುರಿಯನ್ನ

ಬುರುಬುರು ಉಬ್ಬಿದ

ಕೆಂಪಗೆ ಕಾಯ್ದಿಹ

ಕಟ್ಟೋ ನನಗೆ ಪುರಿಯನ್ನ

ರುಚಿ ರುಚಿ ಪುರಿ

ಬಿಸಿ ಬಿಸಿ ಪುರಿ

ಬೇಗನೆ ಕೊಡೋ ನಾಗಣ್ಣ !

***

Thursday, November 20, 2008

ಕೃಷ್ಣ

ಪುಟಾಣಿ ಕೃಷ್ಣ
ಪುಟ್ಟ ಪುಟ್ಟ ಅಂಗೈ
ಭಲಾರೆ ಗಡಿಗೆ
ದೊಡ್ಡ ಬೆಣ್ಣೆ ಮುದ್ದೆ
ತೆಗೆದ ಮುಕ್ಕಿದ
ತೆಗೆದ ನೆಕ್ಕಿದ
ಕೈಯೆಲ್ಲ ಬೆಣ್ಣೆ
ಮುಖವೆಲ್ಲ ಬೆಣ್ಣೆ
ತುಂಟ ಕೃಷ್ಣ
ತುಂಟ ಕೃಷ್ಣ
(ಕವಿ : ಜೆ. ಪಿ. ರಾಜರತ್ನಂ )
***

Wednesday, November 19, 2008

ಹಣ್ಣು ಮಾರುವವನು

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು
ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನ ಹಳ್ಳಿಯ ಚಕ್ಕೋತ
ಗಂಜಾಂ ಅಂಜೀರ್ ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನನಾಸು
ಕೊಳ್ಳಿರಿ ಮರೆತು ಸಿಹಿ ತಿನಿಸು
ನಾಲಿಗೆ ಬರವನು ಕಳೆಯುವವು
ದೇಹದ ಬಲವನ್ನು ಬೆಳೆಸುವವು
ಕೊಳ್ಳಿರಿ ಬಗೆ ಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ
***

Tuesday, November 18, 2008

ನರಿಯ ನಿರಾಸೆ ...

ನರಿಯು ತೋಟಕೆ ಹೋಯಿತು
ನೋಡಿತೇನದು ?
ಚಪ್ಪರದಿಂದ ಹೂಡಿದಾ
ದ್ರಾಕ್ಷಿ ಗೊಂಚಲು
ಒಂದು ಸಲ ಹಾರಿತು
ಎರಡು ಸಲ ಹಾರಿತು
ಮೂರು ಸಲ ಹಾರಿತು
ಸೋತು ಹೋಯಿತು !
ದ್ರಾಕ್ಷಿ ಹುಳಿ ಎಂದಿತು
ಓಡಿ ಹೋಯಿತು !!
***

Monday, November 17, 2008

ಹಕ್ಕಿ ಸಂಸಾರ ...

ಹಕ್ಕಿಯೊಂದು ಹಾರಿ ಬಂದು
ಗೂಡು ಕಟ್ಟಿತು
ಮೊಟ್ಟೆ ಇಟ್ಟು ಕಾವು ಕೊಟ್ಟು
ಮರಿಯ ಮಾಡಿತು
ಹಕ್ಕಿ ಮರಿಗಳೆಲ್ಲ ದಿನವು
ಚಿಂವ್ ಚಿಂವ್ ಅಂದಿತು
ಅಮ್ಮ ಹಕ್ಕಿ ಕಾಳು ಹೆಕ್ಕಿ
ಗುಟುಕು ಕೊಟ್ಟಿತು
ಹಕ್ಕಿ ಮರಿಗಳೆಲ್ಲ ಬಲಿತು
ಹಾರತೊಡಗಿತು
ತಾಯಿ ಹಕ್ಕಿ ಇದನು ಕಂಡು
ಹಾರಿ ಹೋಯಿತು !
(ಕವಿ : ಸುಬ್ರಹ್ಮಣ್ಯ ಭಟ್ )
***

Thursday, November 13, 2008

ಆನೆ

ಆನೆ ಬಂತೊಂದಾನೆ
ಯಾವೂರಾನೆ ?
ಮದವೂರಾನೆ
ದೊಡ್ಡ ಕಿವಿಯಾನೆ
ಸಣ್ಣ ಕಣ್ಣಿನ ಆನೆ
ಗಿಡ್ಡ ಬಾಲದಾನೆ
ಕಬ್ಬು ತಿನ್ನೋ ಆನೆ
ಆನೆ ಬಂತೊಂದಾನೆ
ಯಾವೂರಾನೆ ?
ಮದವೂರಾನೆ
***

Wednesday, November 12, 2008

ವಾಚಾಳಿ ಆಮೆ ...

ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು

ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು

ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು

ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು

ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು

ಆಮೆ ಅದಕೆ ಜೋತು ಬೀಳೆ
ಹಾರಿಹೋದವು

ದಾರಿಯಲ್ಲಿ ಇದನು ಕಂಡ
ಜನರು ನಕ್ಕರು

ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು

ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು

ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !
***

Tuesday, November 11, 2008

ಬಾರಿಸು ಕನ್ನಡ ಡಿಂಡಿಮವ ....



ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ


ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು


ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ


ಕ್ಷಯಿಸಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ



ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

(ಕವಿ : ಕುವೆಂಪು )

***

Monday, November 10, 2008

ಮಿಂಚು ಹುಳು

ಮಿಂಚುಹುಳುವೆ ಬಾ ಬಾ
ನನ್ನ ಬಳಿಗೆ ಬಾ ಬಾ
ಮಿಣಿ ಮಿಣಿ ಮಿನುಗುತ ಬಾ ಬಾ
ಹಾರುತ ಹಾರುತ ಬಾ ಬಾ
ಕತ್ತಲೆಯಲ್ಲಿ ಮಿಂಚುವೆ ನೀನು
ನಿನ್ನನು ಹಿಡಿಯಲು ಬರುವೆನು ನಾನು
ಹತ್ತಿರ ಬಂದರೆ ಹಾರುವೆ ನೀನು
ಹೇಗೆ ಹಿಡಿಯಲಿ ನಿನ್ನನು ನಾನು
ಮಿಂಚುಹುಳುವೆ ಬಾ ಬಾ
ನನ್ನ ಬಳಿಗೆ ಬಾ ಬಾ
***

Sunday, November 9, 2008

ಜೇನು ನೊಣ

ಜೇನು ನೊಣವೆ ಜೇನು ನೊಣವೇ
ಎಲ್ಲಿ ಹೋಗುವೆ ?
ಜುಂಯ್ ಜುಂಯ್ ಸದ್ದು ಮಾಡಿ

ಹಾರುವುದೆಲ್ಲಿಗೆ ?


ವನವನಲೆದು ಜೇನ ತರಲು
ನಾನು ಹೋಗುವೆ
ವನದಿ ಬಿರಿದ ಕುಸುಮಗಳಿಗೆ ಮುತ್ತನಿಕ್ಕುವೆ
ನಾನು ಬರಲೇ ನಿನ್ನ ಜೊತೆಗೆ
ವನವ ನೋಡಲು ಹೂವುಗಳನು ನೋಡಿ
ಹಣ್ಣು ಗಳನು ಮೆಲ್ಲಲು ?
ನೋಡು ಬಾಲ ನನಗೆ ಎರಡು
ರೆಕ್ಕೆ ಇಲ್ಲಿವೆ
ನನ್ನ ಜೊತೆಗೆ ಬರಲು ನಿನಗೆ ರೆಕ್ಕೆ ಎಲ್ಲಿದೆ?
ನಿನಗೆ ನಿನ್ನ ಮನೆಯೇ ಅಂದ
ಅಣ್ಣ ತಮ್ಮ ಅಕ್ಕ ತಂಗಿ
ಎಲ್ಲ ಸೇರಿ ಅದೇ ಚಂದ
ಹೋಗಿ ಆಡೋ ಅಲ್ಲಿ ನೀನು
ಮುದ್ದು ಕಂದನೆ !
(ಕವಿ :ಸುಬ್ರಹ್ಮಣ್ಯ ಭಟ್ )
***

Saturday, November 8, 2008

ವಸಂತ ಬಂದ ...




ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ

ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ

ಇನಿಯರ ಬೇಟ ಬನದಲಿ ಬೆಳದಿಂಗಳೂಟ

ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು

ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !

ಬಂದ ವಸಂತ -ನಮ್ಮಾ

ರಾಜ ವಸಂತ !!

(ಕವಿ : ಬಿ. ಎಂ.ಶ್ರೀ. )
***

Friday, November 7, 2008

ತಿಳಿಮುಗಿಲ ತೊಟ್ಟಿಲಲಿ



ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ

ಗಾಳಿ ಜೋಗುಳ ಹಾಡಿ ತೂಗುತಿತ್ತು

ಗರಿ ಮುದುರಿ ಮಲಗಿತ್ತ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು

ಮುಗುಳಿರುವ ಹೊದರಿನಲಿ ನರುವಂತಿನುದರದಲಿ
ಜೇನುಗನಸಿನ ಹಾಡು ಕೇಳುತಿತ್ತು

ತುಂಬು ನೀರಿನ ಹೊಳೆಯೊಳ೦ಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು


ಬರುವ ಮುಂದಿನ ದಿನದ ನವನವೋದಯಕ್ಕಾಗಿ

ಪ್ರಕೃತಿ ತಪವಿರುವಂತೆ ತೋರುತ್ತಿತ್ತು

ಶಾಂತ ರೀತಿಯರಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನಾ ಶುಭೋದಯವ ಸಾರುತಿತ್ತು .


(ಕವಿ :ಎಸ್ ವಿ. ಪರಮೇಶ್ವರ ಭಟ್ಟ )

***










Thursday, November 6, 2008

ಕೋಳಿ ಮರಿ ...

ಕೋಳಿ ಮರಿ ಕೋಳಿ ಮರಿ
ಎಲ್ಲಿ ಹೋಗುವೆ ?
ತಾಯಿ ಕೋಳಿಯನ್ನು ಬಿಟ್ಟು
ಏಕೆ ಬಂದೆಯೇ?
ಚೀಂವ್ ಚೀಂವ್ ಎಂದು ಕೂಗಿ
ಏನು ಹುಡುಕುವೆ ?
ಇತ್ತ ಬಾ ಕಾಳು ಕಡ್ಡಿ
ನಾನು ತೋರುವೆ !
***

Wednesday, November 5, 2008

ಪ್ರಾರ್ಥನೆ

ಮಹಾನಂದ ವಿಶ್ವರೂಪ
ಮಹಿಮಾಂತರಂಗ
ಶಕ್ತಿದಾಯಕ ಸ್ವಾಮೀ
ಮುಕ್ತಿದಾಯಕ
ತಂದೆಯು ನೀನೆ
ತಾಯಿಯು ನೀನೆ
ಬಂಧುವು ಬಳಗವು
ಎಲ್ಲವೂ ನೀನೆ
ವಿದ್ಯೆ ಕೊಡುವ ದೇವಾ ನೀನೆ
ಬುದ್ದಿ ಕೊಡುವ ದಾತಾ ನೀನೆ
ನಂಬಿಹೆವು ನಾವು ನಿನ್ನ
ತೊರೆಯಬೇಡ ಮಹಿಮಾ
ಮಹಾನಂದ ವಿಶ್ವರೂಪ
ಮಹಿಮಾಂತರಂಗ
ಶಕ್ತಿದಾಯಕ ಸ್ವಾಮೀ
ಮುಕ್ತಿದಾಯಕ
***

Tuesday, November 4, 2008

ಮಲ್ಲಿಗೆ ..


ಮಲ್ಲಿಗೆ ಮಲ್ಲಿಗೆ
ಮಂಗಳೂರು ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಬಿಳಿ ಬಿಳಿ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಘಮ ಘಮ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ದುಂಡು ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಸೂಜಿ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ನಿತ್ಯ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಬೇಕೆ ಮಲ್ಲಿಗೆ ?
ಘಮ ಘಮ ಮಲ್ಲಿಗೆ
***


Monday, November 3, 2008

ಮೀನು

ನೀರಿನಲ್ಲಿ ಈಜುವ ಮೀನು
ಏನನು ಹುಡುಕುತ ಸುತ್ತುವೆ ನೀನು ?
ರೆಕ್ಕೆಯ ಬೀಸಿ ಈಜುವೆ ನೀನು
ಕೈಯನು ಬೀಸಿ ನಡೆಯುವೆ ನಾನು
ಬಾಲವ ಬೀಸಿ ಓಡುವೆ ನೀನು
ಕಾಲಿನಿಂದಲೇ ಓಡುವೆ ನಾನು
ಹಿಡಿಯಲು ಬಂದರೆ ಸಿಗದಿರೆ ನೀನು
ಬಲೆಯನು ಬೀಸಿ ಹಿಡಿಯುವೆ ನಾನು !
ನಿನ್ನ ಹಾಗೆ ಈಜುವ ಆಸೆಯು ನನಗೆ
ನನ್ನ ಹಾಗೆ ಓಡುವ ಆಸೆಯೇ ನಿನಗೆ ?
***

Sunday, November 2, 2008

ಗಿಳಿ

ಹಾರುತ ಹಾರುತ
ಮಾವಿನ ಮರಕೆ
ಗಿಳಿಯು ಬಂತಣ್ಣ

ಹಸಿರೆಲೆ ಬಣ್ಣ
ಅದಕಿದೆ ಅಣ್ಣಾ
ನೋಡಲು ಬಲು ಚೆನ್ನ

ಕೊಕ್ಕಿನ ಬಣ್ಣ
ಕೆಂಪು ಬಣ್ಣ
ಚೆನ್ನಾಗಿದೆಯಲ್ಲವೇನಣ್ಣ?
***

Thursday, October 23, 2008

ಫುಟ್ಬಾಲ್



ಅಪ್ಪನು ಕೊಡಿಸಿದ

ದೊಡ್ಡ ಚೆಂಡು

ಕಾಲಲಿ ಒದೆಯುವ

ದೊಡ್ಡ ಚೆಂಡು

ಗೆಳೆಯರ ಕೂಡಿ

ಆಡುವ ಚೆಂಡು



ಒಂದೇ ಒದೆತಕೆ

ಹಾರುವ ಚೆಂಡು

ಆಗಸದೆತ್ತರ

ಪುಟಿಯುವ ಚೆಂಡು



ಅಪ್ಪನು ಕೊಡಿಸಿದ
ದೊಡ್ಡ ಚೆಂಡು
ಕಾಲಲಿ ಒದೆಯುವ
ದೊಡ್ಡ ಚೆಂಡು

***

Wednesday, October 22, 2008

ಚೈತ್ರದ ಬರುವಿಗೆ

ಚೈತ್ರದ ಬರುವಿಗೆ
ವಸುಮತಿ ವೈಭವ
ಬಣ್ಣದ ಮೇಳವ ನಡೆಸುತಿದೆ
ಕಾಣುವ ಕಣ್ಣಿಗೆ
ಚೆಲುವಿನ ಸಂಭ್ರಮ
ಮೋಹಕ ಕಾವ್ಯವ ಬರೆಯುತಿದೆ
ಯಾವೆಡೆ ನೋಡಲಿ
ಹೂವಿನ ಬೆಡಗು
ರಂಗಿನ ಚಿತ್ರವ ಬರೆಯುತಿದೆ
ಅನುಪಮ ಕೋಗಿಲೆ
ತಳಿರನು ಸವಿದು
ಇಂಪಿನ ಗಾನವ ಹಾಡುತಿದೆ
ನೀಲಿಯ ಗಗನದಿ
ಬೆಳ್ಳಿಯ ಮುಗಿಲು
ಹಾಲಿನ ಹರವಿಯ ಚೆಲ್ಲುತಿದೆ
ಹುಣ್ಣಿಮೆ ಚಂದಿರ
ಕಂಪನು ಸುರಿದು
ಕವಿತೆಗೆ ಪ್ರೇರಣೆ ತುಂಬುತಿದೆ
***

Tuesday, October 21, 2008

ಅವರೆ ಬಳ್ಳಿ



ಅಮ್ಮನು ಬೆಳೆಸಿದ

ಅವರೆ ಬಳ್ಳಿ

ಅಂಗಳ ತುಂಬಾ

ಹಬ್ಬಿದ ಬಳ್ಳಿ

ಗೊಂಚಲು ಗೊಂಚಲು

ಕಾಯ್ಗಳು ಹುಟ್ಟಿ

ಅಮ್ಮನು ತರುವಳು

ತುಂಬಿಸಿ ಬುಟ್ಟಿ

***

Monday, October 20, 2008

ಗೊಂಬೆ



ಗೊಂಬೆಯ ಕೊಳ್ಳಿರಿ ಗೊ೦ಬೆಯನು

ಅಂದದ ಚೆಂದದ ಗೊ೦ಬೆಯನು

ಚಂದದ ಮರದ ಗೊ೦ಬೆಯನು

ಹೊಳೆಯುವ ಗಾಜಿನ ಗೊ೦ಬೆಯನು

ಬಣ್ಣದ ಮಣ್ಣಿನ ಗೊ೦ಬೆಯನು

ಮೆತ್ತನೆ ಬಟ್ಟೆಯ ಗೊ೦ಬೆಯನು

ಗೊಂಬೆಯ ಕೊಳ್ಳಿರಿ ಗೊ೦ಬೆಯನು
ಅಂದದ ಚೆಂದದ ಗೊ೦ಬೆಯನು

***

Sunday, October 19, 2008

ತಟ್ಟನೆ ಹೇಳಿರಿ ..



ಹಕ್ಕಿಯ ತೆರದಲಿ ನಭದಲಿ ಹಾರುವೆ

ರೆಕ್ಕೆಗಳೆನಗಿಲ್ಲ

ಮರಿಗಳ ಹೆರುತಲಿ ಮೊಲೆಯನ್ನುಣಿಸುವೆ

ಕಾಡಿನ ಮೃಗವಲ್ಲ !


ಕರಿ ಕರಿ ಬಣ್ಣದ ಕೊಡೆಯನು ಬಿಡಿಸುತ

ಅಲೆವೆನು ಇರುಳಲ್ಲಿ

ಎನ್ನಬಂಧುಗಳೆಲ್ಲರ ಕೂಡುತ

ನಿದ್ರಿಪೆ ಹಗಲಲ್ಲಿ


ಮೊಗವಿದೆ ಕಿವಿಯಿದೆ ಹಲ್ಲುಗಳೆನಗಿವೆ

ಬಾಲವು ಎನಗಿಲ್ಲ

ಕಾಳುಗಲೆರಡಿದ್ದರು ನಾನೆಲದಲಿ

ನಡೆಯುವ ಪರಿಯಿಲ್ಲ


ವೃಕ್ಷಗಳಲಿ ತಲೆಕೆಳಗಿರಿಸುತ

ತೊಟ್ಟಿಲ ತೂಗುವೆನು

ತೋಟಗಳಲ್ಲಿ ಬೇಟೆಯನಾಡುತ

ಹಣ್ಗಳನುಣ್ಣುವೆನು


ಬಾವಿಯ ಆದಿಲಿ ಭವನದ ನಡುವಲಿ
ಬೇಲಿಯ ಕೊನೆಯಲ್ಲಿ

ಎನ್ನದೆ ಹೆಸರಿದೆ ತಟ್ಟನೆ ಪೇಳಿರಿ

ಮೂರಕ್ಷರಗಳಲಿ !


(ಕವಿ : ಮುಂಡಾಜೆ ರಾಮಚಂದ್ರ ಭಟ್ )


***

Saturday, October 18, 2008

ಕಂಬಳ


ಕಂಬಳ ಕಂಬಳ ಕಂಬಳ
ಓಟದ ಕೋಣದ ಕಂಬಳ
ಕೆಸರು ಗದ್ದೆ ಕಂಬಳ
ಕೊಬ್ಬಿದ ಕೋಣದ ಕಂಬಳ
ಹಗ್ಗದ ಕೋಣದ ಕಂಬಳ
ಬಿಳಿಯ ನಿಶಾನೆಯ ಕಂಬಳ
ಡೋಲಿನ ಡಂ ಡಂ ಕಂಬಳ
ಮಿಠಾಯಿ ತಿಂಡಿ ಕಂಬಳ
ತೂಗುವ ತೊಟ್ಟಿಲ ಕಂಬಳ
ನಾನೂ ಅಪ್ಪನು ನೋಡುವ
ನಮ್ಮ ಊರಿನ ಕಂಬಳ
***

Friday, October 17, 2008

ದಾಸಯ್ಯ



ದಾಸಯ್ಯ ಬಂದ ನಮ್ಮನೆಗೆ

ಜೋಳಿಗೆ ಹಿಡಿದು ಬಾಗಿಲಿಗೆ

ಬಿಳಿಯ ಪಂಚೆ ಉಟ್ಟಿದ್ದ

ಚಂದದ ನಾಮವ ಹಾಕಿದ್ದ

ದೀಪದ ಕಂಬವ ಹಿಡಿದಿದ್ದ

ಎಣ್ಣೆಯ ಬತ್ತಿಯ ಬೇಡಿದ್ದ

ಭಂ ಭಂ ಶಂಖವ ಊದಿದ್ದ

ಡಣ ಡಣ ಜಾಗಟೆ ಬಾರಿಸಿದ

ದಾಸಯ್ಯ ಬಂದ ನಮ್ಮನೆಗೆ
ಜೋಳಿಗೆ ಹಿಡಿದು ಬಾಗಿಲಿಗೆ

***

Thursday, October 16, 2008

ನಿನ್ನನು ವಂದಿಪೆ ..

ನಿನ್ನನು ವಂದಿಪೆ ನಿನ್ನನು ಬೇಡುವೆ

ಎನ್ನನು ಸಲಹೈ ದೇವ




ವಿದ್ಯೆಯ ಕೊಡು ನೀ ಬುದ್ಧಿಯ ಕೊಡು ನೀ

ಸಕಲವ ಕೊಡು ನೀ ದೇವ




ತಾಯಿಯು ನೀನೆ ತಂದೆಯು ನೀನೆ


ಬಂಧುವು ನೀನೆ ದೇವ



ನಿನ್ನ ನೆನಹದು ಎನ್ನೀ ಹೃದಯದಿ

ಸತತವು ನೆಲೆಸಲಿ ದೇವ


ನಿನ್ನನು ವಂದಿಪೆ ನಿನ್ನನು ಬೇಡುವೆ
ಎನ್ನನು ಸಲಹೈ ದೇವ

(kavi : ಪಳ್ಳತ್ತಡ್ಕ ಸುಬ್ರಾಯ ಭಟ್ )


***


Wednesday, October 15, 2008

ತರಕಾರಿ

ತರಕಾರಿ ತರಕಾರಿ
ಅಮ್ಮನು ತಂದ ತರಕಾರಿ
ದಪ್ಪನೆ ಇರುವ ಕುಂಬಳ ಕಾಯಿ
ಉದ್ದನೆ ಇರುವ ಪಡುವಲ ಕಾಯಿ
ಸಣ್ಣಗೆ ಇರುವ ಬೆಂಡೆಕಾಯಿ
ನುಣ್ಣಗೆ ಇರುವ ತೊಂಡೆ ಕಾಯಿ
ಅಮ್ಮನು ತಂದ ತರಕಾರಿ
ನಾನು ತಿನ್ನುವ ತರಕಾರಿ
***

Tuesday, October 14, 2008

ಕರು



ನಮ್ಮ ಕರು ಪುಟ್ಟ ಕರು

ನಮ್ಮ ಹಸುವಿನ ಪುಟ್ಟ ಕರು


ಚೆಂಗು ಚೆಂಗನೆ ನೆಗೆಯುವ ಕರು

ಅಮ್ಮನ ಬಿಟ್ಟು ಓಡದ ಕರು


ಕಂಡು ಬಣ್ಣದ ನಮ್ಮ ಕರು

ನಮ್ಮ ಹಸುವಿನ ಮುದ್ದು ಕರು

***

Monday, October 13, 2008

ಪಾರಿವಾಳ

ಶಾಲೆಗೊಂದು ಪಾರಿವಾಳ
ಹಾರಿ ಬಂದಿತು
ಅದನು ಕಂಡು ಪುಟ್ಟ ಪಾಪ
ಕೈಯ ತಟ್ಟಿತು
ಸದ್ದು ಕೇಳಿ ಪಾರಿವಾಳ
ಹಾರಿ ಹೋಯಿತು
ಪುಟ್ಟ ಪಾಪ ಅದನು ಕಂಡು
ನಿಂತೇ ಬಿಟ್ಟಿತು
***

Tuesday, October 7, 2008

ರೈತ

ನೇಗಿಲ ಹೊತ್ತು
ಹೊಲವನ್ನು ಬಿತ್ತು
ದಿನ ದಿನ ದುಡಿದನು ಸೋಮಣ್ಣ
ಬೀಜವ ಬಿತ್ತಿ
ಜೋಳವ ಬೆಳೆಸಿ
ರಾಶಿಯ ಮಾಡಿದ ಸೋಮಣ್ಣ
ಅಕ್ಕಿಯ ಬೆಳೆದು
ಅನ್ನವ ನೀಡಿ
ಎಲ್ಲರ ಪೊರೆಯುವ ಸೋಮಣ್ಣ
ಕಾಯಕದಲ್ಲಿ ಕೈಲಾಸ
ಕಂಡು ಸುಖ ಸಂತೋಷವ
ಹಂಚುವ ನಮ್ಮ ಸೋಮಣ್ಣ
***

Monday, October 6, 2008

ನವಿಲೇ



ನವಿಲೇ ನವಿಲೇ

ಬಾ ಬಾ ಬಾ

ಬಣ್ಣದ ನವಿಲೇ

ಬಾ ಬಾ ಬಾ


ನಿನ್ನ ಗರಿಯ

ಬಣ್ಣ ಚೆಂದ

ತಲೆಯ ಜುಟ್ಟು

ಬಹಳ ಅಂದ



ನವಿಲೇ ನವಿಲೇ
ಬಾ ಬಾ ಬಾ
ಬಣ್ಣದ ನವಿಲೇ
ಬಾ ಬಾ ಬಾ


***



Sunday, October 5, 2008

ಹಗ್ಗ

ನೀರೆಳೆಯಲು ಬೇಕು ನಾರಿನ ಹಗ್ಗ
ಬಟ್ಟೆಯ ಒಣಗಿಸೆ ನೂಲಿನ ಹಗ್ಗ
ಹಸುವನು ಹಿಡಿಯಲು ಉದ್ದನೆ ಹಗ್ಗ
ಕಂತೆಯ ಕಟ್ಟಲು ಸಣ್ಣನೆ ಹಗ್ಗ
ಆಟವ ಆಡಲು ಬಣ್ಣದ ಹಗ್ಗ
ಆಡುತ ಓಡಲು ಆಟದ ಹಗ್ಗ
***

Saturday, October 4, 2008

ನೀರು




ಅಣ್ಣನು ಕುಡಿವನು


ತಣ್ಣನೆ ನೀರು


ಅಜ್ಜನು ಕುಡಿವನು


ಬಿಸಿ ಬಿಸಿ ನೀರು



ಅಜ್ಜಿಯು ಕುಡಿವಳು


ಮಜ್ಜಿಗೆ ನೀರು


ನನಗೂ ಅಪ್ಪಗೂ


ಸಿಹಿ ಎಳನೀರು !


***


Friday, October 3, 2008

ಆಮೆ



ಆಮೆ ನೋಡಿರಿ ಆಮೆ

ಚಿಪ್ಪಿನ ಚೆಂದದ ಆಮೆ

ಗಟ್ಟಿ ಚಿಪ್ಪಿನ ಆಮೆ

ಮೆಲ್ಲನೆ ನಡೆಯುವ ಆಮೆ

ನೀರಲಿ ಈಜುವ ಆಮೆ

ನೆಲದಲಿ ನಡೆಯುವ ಆಮೆ

ಆಮೆ ನೋಡಿರಿ ಆಮೆ

***

Wednesday, October 1, 2008

ಆನೆ



ಆನೆ ಬಂತು ಆನೆ

ದಪ್ಪ ಗಾತ್ರದ ಆನೆ


ದೊಡ್ಡ ಕಿವಿಯ ಆನೆ

ಸಣ್ಣ ಕಣ್ಣಿನ ಆನೆ


ಉದ್ದ ಸೊಂಡಿಲ ಆನೆ

ತುಂಡು ಬಾಲದ ಆನೆ


ಆನೆ ಆನೆ ಆನೆ

ದಪ್ಪ ಗಾತ್ರದ ಆನೆ

***

Friday, September 26, 2008

ಕಡಲು



ಕಡಲು ತೀರಕೆ ಹೋಗೋಣ

ಅಂದದ ಕಡಲನು ನೋಡೋಣ

ಅಲೆಗಳ ಆಟವ ನೋಡೋಣ

ಬಿಳಿ ಬಿಳಿ ನೊರೆಯಲಿ ಆಡೋಣ

ಮರಳಿನ ಮನೆಯನು ಕಟ್ಟೋಣ

ಈಜುವ ಮೀನನು ನೋಡೋಣ

ಕಪ್ಪೆ ಚಿಪ್ಪನು ಹುಡುಕೋಣ

ದೋಣಿಯ ಆಟವ ಆಡೋಣ !

***

Thursday, September 25, 2008

ಕೊಡೆ



ತಾತನು ಹಿಡಿಯುವ

ಬಿಳಿಯ ಕೊಡೆ

ಅಪ್ಪನು ಹಿಡಿಯುವ

ಕರಿಯ ಕೊಡೆ

ಅಕ್ಕನು ಹಿಡಿಯುವ

ಕೆಂಪು ಕೊಡೆ

ಬಣ್ಣದ ಹೂಗಳ

ನನ್ನ ಕೊಡೆ

ಬಿಸಿಲಲಿ ತಂಪನು

ಕೊಡುವ ಕೊಡೆ

ಮಳೆಯಲಿ ನಮ್ಮನು

ತೋಯಿಸದ ಕೊಡೆ

****

Wednesday, September 24, 2008

ನನ್ನ ಚೆಂಡು



ಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

ರಂಗನು ಕೈಯಲಿ ಎಸೆಯುವ ಚೆಂಡು
ಸಂಗನು ಕೈಯಲಿ ತಟ್ಟುವ ಚೆಂಡು

ಅಣ್ಣನು ಕಾಲಲಿ ಒದೆಯುವ ಚೆಂಡು
ನನ್ನ ಕೈಯಲಿ ಚೆಂದದ ಚೆಂಡು

ಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

***

Tuesday, September 23, 2008

ಅಜ್ಜನ ಹಾಡು



ಅಜ್ಜನು ಬಂದನು

ಮನೆಯೊಳಗೆ

ಗುನುಗುನುಗುಟ್ಟುತ

ಬಾಯೊಳಗೆ

ಪೆನ್ನನು ಹಿಡಿದನು

ಕೈಯೊಳಗೆ

ಹಾಡನು ಬರೆದನು

ಮಕ್ಕಳಿಗೆ !

ಎತ್ತಿನ ಬಂಡಿ



ಅಪ್ಪನು ನಡೆಸುವ ಎತ್ತಿನ ಬಂಡಿ

ಮರದಲಿ ಮಾಡಿದ ಚಂದದ ಬಂಡಿ

ಎಳೆಯಿತು ಅದನು ಎತ್ತಿನ ಜೋಡಿ

ಓಡಿತು ಗಡ ಗಡ ಸದ್ದನು ಮಾಡಿ

ಅಪ್ಪನು ಸಂತೆಗೆ ಹೋಗುವ ಬಂಡಿ

ಅಜ್ಜನು ಊರಿಗೆ ಹೋಗುವ ಬಂಡಿ

ನಮ್ಮ ಮನೆಯ ಚಂದದ ಬಂಡಿ

ಗಡ ಗಡ ಸದ್ದಿನ ಎತ್ತಿನ ಬಂಡಿ !

Monday, September 22, 2008

ಹಾಯಿಕುಗಳು

-1-
ಕತ್ತೆಯು ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀನೊದೆಯದಿರದಕೆ
ಕತ್ತೆಯ ಒದೆಯನು ಹಿಂದಿರುಗಿಸಿದರೆ
ನೋವಿನ ಬಹು ಪಾಲು ನಿನಗೆ .

-2-
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡ !
-3-
ನದಿಗೆದುರೀಸುತ ಹೋಗುವುದಾದರೆ
ಜೀವಂತ ಮತ್ಸ್ಯವೆ ಬೇಕು
ಹೊನಲಿನ ದಿಕ್ಕಿಗೆ ಸಾಗುವುದಾದರೆ
ಕೊಳೆತೊಂದು ಕಸಕಡ್ಡಿ ಸಾಕು !
(ಕವಿ : ಕಡೆಂಗೋಡ್ಲು ಶಂಕರ ಭಟ್ )

***


ಬಾಲಕನೆ..





ಬಾನದೋ ಬೆಳಗಿತು ಕತ್ತಲೆಯೋಡಿತು


ಓ ಓ ಬಾಲಕನೆದ್ದೇಳು


ದಿನಮಣಿಯುದಿಸುತ ಮೇಲಕೆ ಬಂದನು


ಬೆಳಗಿನ ನಿದ್ದೆಯು ಬಲು ಹಾಳು



ದೂರದ ಹೊಲದಲಿ ನೇಗಿಲ ಯೋಗಿಯು


ದುಡಿಯುತಲಿರುವನು ಜನಕಾಗಿ


ಅಮ್ಮನು ದೇವರ ನಾಮವ ಸ್ಮರಿಸುತ


ಕದೆಯುತಲಿರುವಳು ಮೊಸರನ್ನು



ಆಲಸ್ಯವ ಬಿಡು ಚಾಪೆಯ ಮಡಚಿಡು


ಮೋರೆಯ ತೊಳೆವುದು ನೀನಿನ್ನು


ಈಶನ ಸ್ಮರಿಸುತ ಹಿರಿಯರ ನಮಿಸುತ


ಪಾಠಗಳೆಲ್ಲವನೋದುವುದು


ನಿತ್ಯವೂ ಮಿಂದು ಗಂಜಿಯನುಂಡು

ಸಮಯಕೆ ಶಾಲೆಗೆ ಹೋಗುವುದು

ಪುಸ್ತಕ ಸ್ಲೇಟು ಬೆಳ್ಳನೆ ಶರಟು

ಟೋಪಿಯನೇರಿಸುತನ್ದದಲಿ

ಬೀದಿಗಳಲ್ಲಿ ಬಲಬದಿಯಲ್ಲಿ

ನೆಟ್ಟನೆ ನಡೆವುದು ಶಿಸ್ತಿನಲಿ

ಆಟವ ಪಾಠವನೆಲ್ಲವನೋದಿ

ಜಾಣನಾಗು ಬಾಳಿನಲಿ

(ಕವಿ : ಸುಶೀಲಮ್ಮ ಎಂ. )

***

Saturday, September 20, 2008

ತಿರುಕನ ಕನಸು

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತರವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು
ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು
ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟ ಸುಖದೊಳಿರಲವನ್ಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ
ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ
ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ಮುನಿದ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು !
ಮೆರೆಯುತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತಿದ್ದ
ಹಿಂದಿನಂತೆಯೇ
(ಕವಿ : ಮುಪ್ಪಿನ ಷಡಕ್ಷರಿ )
***

Thursday, September 18, 2008

ತುತ್ತೂರಿ



ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು

ಸನಿದಪ ಮಗರಿಸ ಊದಿದನು

ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತುರಿಯೂದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು
ಬಣ್ಣದ ತುತ್ತೂರಿ ಹಾಳಾಯ್ತು
ಜಂಭದ ಕೋಳಿಗೆ ಗೋಳಾಯ್ತು
(ಕವಿ : ಜಿ.ಪಿ. ರಾಜರತ್ನಂ )
***

ಗಾಳಿಪಟ




ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ

ಸುಂದರ ಬಾಲಂಗೋಚಿಯ ನನ್ನ ಪಟ




ಬಿದಿರಿನ ಕಡ್ಡಿಯ ಗಾಳಿಪಟ

ಬೆದರದ ಬೆಚ್ಚದ ಗಾಳಿಪಟ

ಉದ್ದದ ಬಾಲದ ಗಾಳಿಪಟ

ನನ್ನಯ ಮುದ್ದಿನ ಗಾಳಿಪಟ

***

Wednesday, September 17, 2008

ನಾನು ಯಾರು ?



ಚಿಕ್ ಚಿಕ್ ಚಿವ್ ಚಿವ್

ಎಂದುಕೊಂಡು ಮರಗಳಲ್ಲಿ

ಅತ್ತ ಇತ್ತ ಓಡುತಿರುವೆ

ನಾನು ಯಾರು ?

ಹಣ್ಣು ಕಾಯಿ ಬೀಜ ಗೊರಟು

ದವಸಧಾನ್ಯವೆಲ್ಲವನ್ನು

ತಿಂದುಕೊಂಡು ಹೊಟ್ಟೆ ಹೊರೆವೆ

ನಾನು ಯಾರು ?

ಮರದ ಚಿಕ್ಕ ಪೊಟರೆಯೊಳಗೆ

ಗೂಡು ಕಟ್ಟಿ ಮರಿಗಳೊಡನೆ

ವಾಸಮಾಡುತಿರುವೆನಣ್ಣ

ನಾನು ಯಾರು ?

ಉಣ್ಣೆಯಂತೆ ನುಣ್ಣಗಾದ

ರೋಮವಿರುವ ಬೆನ್ನ ಮೇಲೆ

ಬಿಳಿಯ ಮೂರು ಗೆರೆಗಳಿಹವು

ನಾನು ಯಾರು?

ಚಿಕ್ ಚಿಕ್ ಚಿವ್ ಚಿವ್

ಚಿಕ್ ಚಿಕ್ ಚಿವ್ ಚಿವ್

ಎನುವ ಪುಟ್ಟ ಹಾಡುಗಾರ

ನಾನು ಯಾರು ?

(ಕವಿ : ಪಳಕಳ ಸೀತಾರಾಮ ಭಟ್ )

***

Tuesday, September 16, 2008

ನನ್ನ ಕುದುರೆ


ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಚಂದಪ್ಪನಿಗೆ ಚಿಗರೆಯೇ ಕುದುರೆ
ಮಾದೇವನಿಗೆ ನಂದಿಯೇ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೇ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗೆ ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
(ಕವಿ : ಸಿದ್ದಯ್ಯ ಪುರಾಣಿಕ )
***

Monday, September 15, 2008

ಡೊಳ್ಳು ಹೊಟ್ಟೆ ಗಣಪಣ್ಣ ..

ಡೊಳ್ಳು ಹೊಟ್ಟೆ ಗಣಪಣ್ಣ
ನಮ್ಮಯ ಮನೆಗೆ ಬಾರಣ್ಣ
ಆನೆಯ ಮೊಗವ ತೋರಣ್ಣ
ಇಲಿಯನು ಏರುತ ಬಾರಣ್ಣ
ಅಣ್ಣನು ತಳಿಯುವ ಪನ್ನೀರ
ನಾನು ತೊಡಿಸುವೆ ಹೂಹಾರ
ಅಪ್ಪನು ಆರತಿ ಮಾಡುವನು
ಅಮ್ಮನು ಶಂಖವ ಊದುವಳು
ತಮ್ಮನು ಜಾಗಟೆ ಬಡಿಯುವನು
ತಂಗಿಯು ಭಜನೆ ಮಾಡುವಳು
ಅಜ್ಜನು ಕೊಡುವನು ಕಜ್ಜಾಯ
ಅಜ್ಜಿಯು ಕೊಡುವಳು ಗೋಕ್ಷೀರ
ಚೌತಿಯ ದಿನವೇ ಬಾರಣ್ಣ
ಚಕ್ಕುಲಿ ಕಡಲೆ ನಿನಗಣ್ಣ
ಬೇಗನೆ ಬಾರೋ ಗಣಪಣ್ಣ
ಡೊಳ್ಳು ಹೊಟ್ಟೆ ಗಣಪಣ್ಣ
(ಕವಿ : ಕ.ಸುಬ್ರಹ್ಮಣ್ಯ ಭಟ್ )
***

Sunday, September 14, 2008

ಎಲ್ಲೋ ಹುಡುಕಿದೆ ..

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ .

(ಕವಿ : ಜಿ. ಎಸ್ .ಶಿವರುದ್ರಪ್ಪ )
***

Saturday, September 13, 2008

ಚಂದು ಮಾಮ


ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ


ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೆ ಕೊಡುವೆ
ಬಾ ಬಾ ಚಂದು ಮಾಮ
ತಿಂಡಿ ತಿನ್ನು ಬಾ


ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ


ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ


ಆಟದ ಸಾಮಾನೆಲ್ಲ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾ ಬಾ ಚಂದು ಮಾಮ
ಕೂಡಿ ಆಡು ಬಾ

(ಕವಿ : ಹೊಯಿಸಳ )
***

Friday, September 12, 2008

ಗುಬ್ಬಿ

ಗುಬ್ಬಿ ಗುಬ್ಬಿ
ಚಿಂವ್ ಚಿಂವ್ ಎಂದು
ಕರೆಯುವೆ ಯಾರನ್ನು ?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು ?
ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ ?
ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಲ್ಲಿ ?
ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ
ಹಣ್ಣು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

(ಕವಿ: ಎ.ಕೆ. ರಾಮೇಶ್ವರ )
***

Thursday, September 11, 2008

ಕರಡಿಯ ಕುಣಿತ


ಕರಡಿಯ ತಕತಕ ಕುಣಿಸುತ ಬಂದನು
ಸಿದ್ದಿದ್ದಿ ಬಾವಾ ಬಾಲರ ಬಾವಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕುಣಿಸುತ ಬಾ ಬಾ
ಊರಿನ ಹುಡುಗರ ಹಿಗ್ಗನು ಹೆಚ್ಚಿಸಿ
ಉಬ್ಬಿಸಿ ಹಾರಿಸಿ ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕೊರಳೊಳು ಕವಡೆಯ ಸರವು
ಕಾಲಿನ ಗೆಜ್ಜೆಯ ನುಡಿಸುತ ಬಾ
ಎರಡೇ ಕಾಲಲಿ ನಿಲ್ಲಿಸಿ ನಡೆಸುತ
ನಮ್ಮನು ನಗಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಮೂಗಿನ ಮೇಗಡೆ ಮುಂಗಾಲಿರಿಸಿ
ಸಲಾಮು ಹೊಡೆಸಲು ಬಾ ಬಾ
ಮೈಯ ಕೂದಲನು ಪಟ ಪಟ ಜಾಡಿಸಿ
ನಮ್ಮನು ನಲಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಡಮ ಡಮ ಡಮರುಗ ಬಾರಿಸಿ ಬಾವಾ
ಊರಿಗೆ ಊರನೆ ಎಬ್ಬಿಸಿ ಬಾ
ವರುಷಕ್ಕೊಮ್ಮೆ ಕರಡಿಯ ಕುಣಿಸಿ
ನಮ್ಮನು ನಗಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕುಣಿಸುತ ಬಾ ಬಾ
(ಕವಿ: ಸಿದ್ಧಯ್ಯ ಪುರಾಣಿಕ )
***

Wednesday, September 10, 2008

ಮೊದಲು ಕೆಲಸ ಮಾಡುವೆ

ಮಗು: ಇರುವೆ ಇರುವೆ ಕರಿಯ ಇರುವೆ

ನಾನು ಜೊತೆಗೆ ಬರುವೆ

ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ

ಇರುವೆ : ಮಳೆಯ ಕಾಲ ಬರುತಲಿಹುದು

ನನಗೆ ಸಮಯವಿಲ್ಲ

ಅನ್ನ ಕೂಡಿ ಹಾಕಿ ಇಟ್ಟು

ಕರೆಯ ಬರುವೆನಲ್ಲ !

ಮಗು : ನಾಯಿಮರಿ ನಾಯಿಮರಿ

ನಿನ್ನ ಜೊತೆಗೆ ಆಡುವೆ

ಕುಂಯ್ ಕುಂಯ್ ರಾಗ ಕಲಿಸು

ನಿನ್ನ ಹಾಗೆ ಹಾಡುವೆ

ನಾಯಿಮರಿ : ಆಡಲಿಕ್ಕೆ ಹಾಡಲಿಕ್ಕೆ

ನನಗೆ ಸಮಯವಿಲ್ಲ

ಅನ್ನ ಹಾಕಿದವನ ಮನೆಯ

ಕಾಯುತಿರುವೆನಲ್ಲ !

ಮಗು : ಜೇನು ಹುಳುವೆ ಜೇನು ಹುಳುವೆ

ಎಲ್ಲಿ ಹೋಗುತಿರುವೆ ?

ಕರೆದುಕೊಂಡು ಹೋಗು ನನ್ನ

ನಿನ್ನ ಜೊತೆಗೆ ಬರುವೆ

ಜೇನು ಹುಳ : ಬನವ ಸುತ್ತಿ ಸುಳಿದು ನಾನು

ಜೇನನರಸಿ ತರುವೆ

ಈಗ ಬೇಡ ಚೈತ್ರ ಬರಲಿ

ಆಗ ನಾನು ಕರೆವೆ !

ಮಗು : ಕುಹೂ ಕುಹೂ ಕೂಗುತಿರುವ

ಮಧುರ ಕಂಠ ಕೋಗಿಲೆ

ಎಲೆಯ ಬಲೆಯ ನೆಲೆಯೊಳಿರಲು

ನಾನು ಜೊತೆಗೆ ಬರುವೆ

ಕೋಗಿಲೆ : ಕಾಕ ದೃಷ್ಟಿ ತಪ್ಪಿಸಲ್ಕೆ

ಹೊಂಚಿನಲ್ಲಿ ಇರುವೆ

ಚೈತ್ರ ಕಳೆಯೆ ಒಂಟಿ ಇರುವೆ

ಆಗ ಕರೆಯ ಬರುವೆ

ಮಗು : ಯಾರು ಇವರು ನನ್ನ ಕೂಡೆ ಆಡಲಿಕ್ಕೆ ಒಲ್ಲರು

ತಮ್ಮ ತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು

ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ

ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ !!

(ಕವಿ : ಸಿಸು ಸಂಗಮೇಶ )

***

ಯಾವುದು ಚಂದ ?

ನಗುತಿರುವ ಮಗು ಚಂದ
ಅರಳಿರುವ ಹೂ ಚಂದ
ಉದಯಿಸುವ ಸೂರ್ಯಬಿಂಬವು ಬಹಳ ಚಂದ

ಸತ್ಯ ಸದ್ಗುಣ ಚಂದ
ಶುದ್ಧ ಜೀವನ ಚಂದ
ದೇವರೊಲುಮೆಯು ಚಂದಕೆಲ್ಲ ಚಂದ

Tuesday, September 9, 2008

ಗಡಿಯಾರ

ಗಂಟೆಯ ನೆಂಟನೆ ಓ ಗಡಿಯಾರ
ಬೆಳ್ಳಿಯ ಬಣ್ಣದ ಗೋಳಾಕಾರ
ವೇಳೆಯ ತಿಳಿಯಲು ನೀನಾಧಾರ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಹಗಲೂ ಇರುಳೂ ಒಂದೇ ಬಾಳು
ನೀನಾವಾಗಲು ದುಡಿಯುವ ಆಳು
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಮುಖ ಒಂದಾದರು ದ್ವಾದಶ ನೇತ್ರ !
ಮೂರು ಕೈಗಳು ಏನು ವಿಚಿತ್ರ !
ಯಂತ್ರ ಪುರಾಣದ ರಕ್ಕಸ ಪುತ್ರ !
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಎನ್ನುತ ಹೇಳುವೆಯೇನು ?
ನಿನ್ನೀ ಮಾತಿನ ಒಳಗುಟ್ಟೇನು?
"ಕಾಲವು ನಿಲ್ಲದು " ಎನ್ನುವಿಯೇನು ?
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ದುಡಿಯುವುದೊಂದೇ ನಿನ್ನಯ ಕರ್ಮ
ದುಡಿಸುವುದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಧರ್ಮ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
(ಕವಿ : ದಿನಕರ ದೇಸಾಯಿ )
****

Monday, September 8, 2008

ಪಟಾಕಿ

ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
ಬಗೆ ಬಗೆ ಬಣ್ಣದ ಹೂಗಳ ರೂಪದಿ
ಹಾರುತ ಬುಸು ಬುಸುಗುಟ್ಟುವುವು
ಉರಿಯನು ಸುರಿಸುತ ಮೊರೆಯುತ ತಿರುಗುತ
ಸರಸರನೆಲ್ಲೆಡೆ ಹರಿಯುವುವು
ಸರುವರ ಕಿವಿಗಳ ಕೊರೆಯುವುವು
ಮೂಗಿನ ಸೆಲೆಗಳನೊಡೆಯುವುವು
ಸಾರವ ತೆರೆಯುತ ಕಡೆಯಲಿ ಕಪ್ಪಗೆ
ನೆಲದಲಿ ದೊಪ್ಪನೆ ಕೆಡೆಯುವುವು
ಅಜ್ಜನ ಮಡಿಯನು ತೊಡೆಯುವುವು
ಅಪ್ಪನ ಜೇಬುಗಳೊಡೆಯುವುವು
ಸಿಡಿಯುವುವು ಸಿಡಿಯುವುವು
ಹರಿಯಿತು ಹರ್ಷವು ದೇಶದಿ
ದೀಪಾವಳಿ ಹಬ್ಬವು ತಾ ಬರುತಿರಲು
ಹೊರಲಾರದೆ ಸಾಹಸದಿ ಪಟಾಕಿಯ
ಹೊರೆಗಳ ಮೆಲ್ಲನೆ ತರುತಿರಲು
ಸಿಡಿವ ಚಟಾಕಿಯ ತರುತಿರಲು
ಹುಡುಗರು ನಲಿಯುತ ಕುಣಿಕುಣಿದಾಡುತ
ಹಿಡಿದು ಚಟಾಕಿಯ ಸುಡುತಿಹರು
ಸಿಡಿದು ಚಟಾಕಿಯು ಮೇಲಕೆ ಹಾರಲು
ನಿಲ್ಲದೆ ಚಪ್ಪಾಳೆ ತಟ್ಟುವರು
ಸಡಗರಗೊಳ್ಳುತ ದೂರದಿ ನೋಡುತ
ಲಲನೆಯರೆಲ್ಲರು ನಗುತಿಹರು
ಸಿಡಿಯೆ ಚಟಾಕಿಯು ನಗುತಿಹರು
ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
(ಕವಿ : ಎಲ್. ಗುಂಡಪ್ಪ )
***

Sunday, September 7, 2008

ಅಂಚೆಯವನು



ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿ ಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು



ಹೆಗಲಲಿ ಹಳದಿಯ ಹಸುಬೆಯ ನೀಡಿ

ಕಾಲಲಿ ಚರ್ಮದ ಜೋಡಿ

ತಲೆಯಲಿ ಖಾಕಿಯ ಪಗಡಿಯ ನೋಡಿ

ಕಾಗದ ಬಂತು ಕಾಗದವು



ಒಳಗಿಂದಲಿ ಜನರೆನ್ನನು ಕಂಡು

ಬೇಗನೆ ಹೊರ ಅಂಗಳಕೈತಂದು

ಕಾಗದವಿದೆಯೇ ಎನ್ನುವುದುಂಟು

ಕಾಗದ ಬಂತು ಕಾಗದವು



ಸೊಗಸಿನ ಸುದ್ದಿಯ ಕೊಡುವೆನು ನಿಮಗೆ

ವ್ಯಸನದ ವಾರ್ತೆಯ ಕೊಡುವೆನು ತಮಗೆ

ಎಲ್ಲ ಸುದ್ದಿಗಳೊಂದೇ ನಮಗೆ

ಕಾಗದ ಬಂತು ಕಾಗದವು



ಓಲೆಯ ಕೊಡುವಧಿಕಾರಿಯು ನಾನು

ಆದರು ಅದರಲಿ ಬರೆದುದು ಏನು

ಎಂಬುದನರಿಯದ ಬಲು ಸುಖಿ ನಾನು

ಕಾಗದ ಬಂತು ಕಾಗದವು

***

Saturday, September 6, 2008

ಜೇಡ ಮತ್ತು ನೊಣ ..




ಬಾ ನೊಣವೆ ಬಾ ನೊಣವೆ ಬಾ ನನ್ನ ಮನೆಗೆ
ಬಾನಿನೊಳು ಹಾರಿ ಬಲು ದಣಿವಾಯಿತೆ ನಿನಗೆ
ನೀನೊಮ್ಮೆ ಬಾ ನನ್ನ ಹೊಸಮನೆಯ ನೋಡು
ಈ ನೂಲಿನ ಚಾಪೆಯಲಿ ಬಂದು ಕೂಡು
ಆ ಮಾತಿಗಾ ನೊಣವು ಎಲೆ ಜೇಡ ಜೇಡ
ಈ ಮನೆಯೊಳುಪಚಾರ ಹಾ ಬೇಡ ಬೇಡ
ನೀ ಮಾಡಿದಾ ಚಾಪೆ ನನಗೊಂದು ದೂಪೆ
ಆ ಮರದ ತೂತು ಮನೆ ಇದೆ ಅಲ್ಲಿ ಪೋಪೆ
ಎಲೆ ನೊಣವೆ ನಿನ್ನ ತಿರುಗಾಟ ನೋಡಿ
ತಲೆ ತಿರುಗುತಿದೆ ಬಾರೋ ದಯಮಾಡಿ
ಎಲೆಯ ಹಾಕಿರುವೆ ನೀನುಂಡು ಸುಖಿಯಾಗು
ಮಲಗು ಎಳೆ ಹಾಸಿನಲಿ ಬಳಿಕೆದ್ದು ಹೋಗು
ನಿನ್ನಲ್ಲಿ ಉಂಡವನು ಬೇರೆ ಬಾಳುವನೇ
ನಿನ್ನಲ್ಲಿ ಮಲಗಿದವ ಮತ್ತೆ ಎಳುವನೆ
ನಿನ್ನ ಕಥೆಯನು ಹಿರಿಯರಿಂ ಕೇಳಿ ಬಲ್ಲೆ
ನಿನ್ನಲ್ಲಿ ಬರಲೊಲ್ಲೆ ನಾನು ಬರಲೊಲ್ಲೆ
ಅರರೆ ನೊಣಗೊಂಬೆ ಮೈಗೊಂದ ನಿಂಬೆ
ಹರಿನೀಲ ಕಣ್ಗೊ೦ಬೆ ನೋಡಿ ಸೊಗಗೊಂಬೆ
ಗರಿ ಪಚ್ಚೆಯಲಿ ತುಂಬೆ ಆಹಾ ಹೊಸತುಂಬೆ
ಸ್ವರವು ಝೇ೦ ಝೇ೦ ಎಂಬೆ ಮಧುರವನು ತುಂಬೆ
ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ
ಬೀಳೆ ಕಿವಿಯಲಿ ಮಾತು ನೊಣವುಬ್ಬಿತ೦ತೆ
ಆಳ ನೋಡದ ಮಡುವಿನಲಿ ಧುಮುಕುವಂತೆ
ಬೋಳು ತಲೆ ನೊಣವು ಬಲೆಯಲಿ ಹಾರಿತಂತೆ
ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆ ನೊಣ ಮೈಯೇರಿ ಮುಳ್ಳುಗಳ ತೂರಿ
ಚಿಳ್ಳೆ೦ದು ವಿಷಕಾರಿ ನೆತ್ತರನು ಹೀರಿ
ಕೊಳ್ಳೆ ಹೊಡೆಯಲು ನೊಣವು ಸತ್ತಿತೈ ಚೀರಿ
(ಕವಿ : ಪಂಜೆ ಮಂಗೇಶರಾಯರು )
***
( ಈ ಹಾಡಿನ ಪೂರ್ಣ ಪಾಠವನ್ನು ಒದಗಿಸಿದ ಶ್ರೀ ರಾಜಕುಮಾರ್ ಮತ್ತು ಶ್ರೀ ನಾರಾಯಣ ಗಟ್ಟಿ ಯವರಿಗೆ ಕೃತಜ್ಞತೆಗಳು)

ಬಾರೆ ಹೋಗುವ ಸಾಗುವ ....

ನಮ್ಮ ಊರಿನ
ಜಾತ್ರೆ ಈ ದಿನ
ಬಾರೆ ಹೋಗುವ ಸಾಗುವ !
ಅಮ್ಮ ಬರುವಳು
ಅಕ್ಕ ಬರುವಳು
ಬಾರೆ ಹೋಗುವ ಸಾಗುವ !
ಅಪ್ಪ ಬರುವನು
ಅಣ್ಣ ಬರುವನು
ಬಾರೆ ಹೋಗುವ ಸಾಗುವ !
ತಮ್ಮ ಬರುವನು
ತಂಗಿ ಬರುವಳು
ಬಾರೆ ಹೋಗುವ ಸಾಗುವ !
ಮಾವ ಬರುವನು
ಬಾವ ಬರುವನು
ಬಾರೆ ಹೋಗುವ ಸಾಗುವ !
ದುಡ್ಡು ಕೊಡುವರು
ಲಡ್ಡು ಕೊಡುವರು
ಬಾರೆ ಹೋಗುವ ಸಾಗುವ !!
(ಕವಿ : ಹೊನ್ನಯ್ಯ ಶೆಟ್ಟಿ )
***

Friday, September 5, 2008

ಬೆಣ್ಣೆ ಕದ್ದ ನಮ್ಮ ಕೃಷ್ಣ ..

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ
ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಳಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು ಬೆಚ್ಚಿದ ರಾಧೆಯ ಗಂಡನಮ್ಮ
ತಾಯಿ ಬಂದಳೋಡಿ , ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು
ಆದಳು ಅರೆಚಣ ಭೀಕರ ತಾಳಿ ದುರುದುರು ಕಣ್ಣಿಟ್ಟು
ಹಣೆ ತುಂಬ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ ಅರಳಿತು ಕೆಂದುಟಿ ತುಂಟನ ನೋಟಕ್ಕೆ
ತಪ್ಪಿದ ದಂಟಕೆ ನಿಟ್ಟುಸಿರೆಳೆದ ಬೆಣ್ಣೆಗಳಾ ನೀಲಾ
ತಟ್ಟನೆ ಅಳುವುದ ನಿಲ್ಲಿಸಿ ಬಾಯಗಲಿಸಿ ಬಾಲ
ಹರಡಿದ ಬೆಳದಿಂಗಳ ಜಾಲ ಅರಳಿದ ಬೆಳದಿಂಗಳ ಲಾಲ
ಅವನ ಆ ಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರಾ
ಸಂತತ ನಗಿಸಲಿ ನಗದವರ
(ಕವಿ : ಕೆ. ಎಸ್ .ನಿಸಾರ್ ಅಹಮದ್ )
***

ಚಂದಿರನೇತಕೆ ಓಡುವನಮ್ಮ...

ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೆ?
ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೇ?
ಮಂಜಿನಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

(ಕವಿ :ನೀ . ರೆ. ಹೀರೇಮಠ )

****

Thursday, September 4, 2008

ಸಾರುತಿದೆ ಸೃಷ್ಟಿ

ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು !
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು !
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು !!
(ಕವಿ : ಕಾವ್ಯಾನಂದ )
****