ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
ಮುಗ್ಧ ಮನಸಿನ ಸುಪ್ತ ಸಂತೋಷ ....
ವಿಶಾಲ ಭಾರತ
ಭವ್ಯ ದಿವ್ಯ ಭಾರತ
ಸಂಸ್ಕೃತಿಯ ನೆಲೆಯು ಭಾರತ
ಪ್ರಕೃತಿ ಸೌ೦ದರ್ಯದಿ
ಜಗದಿ ದಿವದಿ ಮೆರೆಯುವ
ಪುಣ್ಯ ಭೂಮಿ ನಮ್ಮ ಭಾರತ
ಎದ್ದೇಳಿ ವೀರ ಪ್ರಜೆಗಳೇ
ಶಾಂತಿಗಾಗಿ ಮುನ್ನಡೆಯಿರಿ
ಭ್ರಾತೃತ್ವವವನ್ನು ಬೆಳೆಸಿರಿ
ಒಂದಾಗಿ ಕೂಡಿ ಬಾಳಿರಿ
ವಿಶಾಲ ಭಾರತ
ಭವ್ಯ ದಿವ್ಯ ಭಾರತ
ಸಂಸ್ಕೃತಿಯ ನೆಲೆಯು ಭಾರತ
***
ತಣ್ಣನೆ ರಾತ್ರಿಯ ಆಕಾಶದಲಿ
ಚಂದಿರ ನಗುತಿದ್ದ
ಅಮ್ಮನ ಕೂಡೆ ಅಂಗಳದಲ್ಲಿ
ಕಂದನು ಕುಳಿತಿದ್ದ
ಮಲ್ಲಿಗೆ ಹೂವಿನ ಪರಿಮಳ ಮೆಲ್ಲನೆ
ತೇಲುತ ಬರುತಿರಲು
ಮಿಂಚುಹುಳವು ಮಿರಿ ಮಿರಿಗುಟ್ಟುತ
ಬಳ್ಳಿಯ ಬಳಿಯಿರಲು
ಹಚ್ಚಿದ ಹಣತೆಯ ಹಿಡಿಯುತ
ಬಂದಳು ಅಕ್ಕನು ತಾನಾಗಿ
ಪಕ್ಕನೆ ಎಣ್ಣೆಯ ಕುಡಿಕೆಯ
ಮರೆಯಲು ಅಪ್ಪನು ಒಳ ಹೋಗಿ
ದೀಪವನಿರಿಸಲು ತುಳಸಿಯ
ಬುಡದಲಿ ಕೈಜೋಡಿಸಿ ನಿಂತು
ದೇವರ ನೆನೆಯುವ ಪರಿಯನು ಕಂಡು
ಕಂದಗೆ ನಗು ಬಂತು .
(ಕವಿ : ಸುಬ್ರಹ್ಮಣ್ಯ ಭಟ್)
***
ಬಾರಣ್ಣ ನೋಡಣ್ಣ
ಓ ಮುದ್ದು ಚಿಣ್ಣ
ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ
ಮೇಲೆ ಕೇಸರಿ ಬಣ್ಣ
ನಡು ಬಿಳುಪಣ್ಣ
ಕೆಳಗೆ ಹಸಿರು ಬಣ್ಣ
ನಡುವೆ ಚಕ್ರವಣ್ಣ
ಬಾರಣ್ಣ ನೋಡಣ್ಣ
ಓ ಮುದ್ದು ಚಿಣ್ಣ
ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ
ಪುರಿಗಳ ಅಂಗಡಿ ನಾಗಣ್ಣ
ಕೊಡು ನಾಕಾರು ಪುರಿಯನ್ನ
ಬುರುಬುರು ಉಬ್ಬಿದ
ಕೆಂಪಗೆ ಕಾಯ್ದಿಹ
ಕಟ್ಟೋ ನನಗೆ ಪುರಿಯನ್ನ
ರುಚಿ ರುಚಿ ಪುರಿ
ಬಿಸಿ ಬಿಸಿ ಪುರಿ
ಬೇಗನೆ ಕೊಡೋ ನಾಗಣ್ಣ !
***
ಹಾರುವುದೆಲ್ಲಿಗೆ ?
ಗಾಳಿ ಜೋಗುಳ ಹಾಡಿ ತೂಗುತಿತ್ತು
ಗರಿ ಮುದುರಿ ಮಲಗಿತ್ತ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು
ತುಂಬು ನೀರಿನ ಹೊಳೆಯೊಳ೦ಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು
ಬರುವ ಮುಂದಿನ ದಿನದ ನವನವೋದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತ್ತಿತ್ತು
ಶಾಂತ ರೀತಿಯರಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನಾ ಶುಭೋದಯವ ಸಾರುತಿತ್ತು .
(ಕವಿ :ಎಸ್ ವಿ. ಪರಮೇಶ್ವರ ಭಟ್ಟ )
***