Tuesday, March 3, 2009

ನನ್ನ ಬಯಕೆ



ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯೊ೦ದರಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳ ಇಂಚರವು
ಕಲೆಯುತಲೆಯಲೆಯಾಗಿ ಕೇಳಿ ಬರುತಿರಲೆನಗೆ


ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ


ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಪಿಯಲೆದಡ್ಡಾಡೆ
ಗೋಪಾಲಕನಾಗಿರುವ ತಿಮ್ಮನೆನಗಿರಲಿ


ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆಯೇನೆಂದು ಎಲ್ಲರರಿತಿರಲಿ
ಸಗ್ಗವಿವನೊಳಗೊ೦ಡಿರಲು ಸಗ್ಗವೆನಗಿರಲಿ
ನರಕವಿವನೊಳಗೊ೦ಡಿರಲು ನರಕವೆನಗಿರಲಿ

(ಕವಿ : ಕುವೆಂಪು )
***

2 comments:

YAKSHA CHINTANA said...

ಭಾವನಾತ್ಮಕ ಕವನ ಎಲ್ಲಿತ್ತು ಇದು.?

ಸುಬ್ರಹ್ಮಣ್ಯ ಭಟ್ said...

nanage 5 ne class nalli pata pustakadalli ittu. bayipata madabekada padyagalalli idoo ondu.