Friday, August 29, 2008

ಹಕ್ಕಿ

ಪುಟ್ಟ ಪುಟ್ಟ ಹಕ್ಕಿ
ಪುಟಾಣಿ ಹಕ್ಕಿ
ಚಿಕ್ಕ ಕಣ್ಣಿನ ಹಕ್ಕಿ
ಸಣ್ಣ ಕೊಕ್ಕಿನ ಹಕ್ಕಿ
ಕಾಳು ತಿನ್ನುವ ಹಕ್ಕಿ
ನೀರು ಕುಡಿಯುವ ಹಕ್ಕಿ
ಮೇಲೆ ಹಾರೋ ಹಕ್ಕಿ
ಗೂಡು ಸೇರೋ ಹಕ್ಕಿ

ನೆಲದ ಕರೆ ..

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ
ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ
ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲ ಗಗನದಲಿ ತೇಲಿ ಹೋಗುತಿಹ
ನಿಮ್ಮನೆಳೆಯಬಹುದೆ ?
ಬಾಯುಂಟು ನನಗೆ ಕೂಗ ಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು
ಓ ಬನ್ನಿ ಬನ್ನಿ ಓ ಬನ್ನಿ ಬನ್ನಿ
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ
(ಕವಿ : ಜಿ. ಎಸ್ . ಶಿವರುದ್ರಪ್ಪ )

***


Thursday, August 28, 2008

ಊಟದ ಆಟ

ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುದುರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು .
(ಕವಿ : ಜಿ.ಪಿ. ರಾಜರತ್ನಂ )
***

Wednesday, August 27, 2008

ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮೀ ನನ್ನಯ್ಯ ರಥವೇರಿ
ಬರುವಾಗ ನಾವೆದ್ದು ಕೈಯ್ಯ ಮುಗುದೇವು

ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ

ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ
ಕಪ್ಪಾದ ಹಸುವು ಕರೆದಾರೆ
ಆ ಹಾಲು ಒಪ್ಪೀತು ಶಿವನ ಪೂಜೆಗೆ
ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವನ್ತನಾಗಿ ಮೆರೆಯಾಲಿ
****

ಅನಿಕೇತನ

ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,ಆಗು ನೀ ಅನಿಕೇತನ!

ಅನ೦ತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,ಆಗು ನೀ ಅನಿಕೇತನ!
(ಕವಿ : ಕುವೆಂಪು )
****

Tuesday, August 26, 2008

ಮಂಗಗಳ ಉಪವಾಸ

ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .
ಏನೂ ತಿನ್ನದೆ ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು
"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು
ತೋಟದಿ ಬಾಳೆಯ ಹಣ್ಣನು ನೋಡಲು
ಆಶೆಯು ಹೆಚ್ಚಿತು ನೀರೂರಿ
"ಸುಲಿದೇ ಇಡುವ ಆಗದೆ " ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು
"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ ಇಟ್ಟವು
"ಜಗಿದೇ ಇಡುವೆವು " ಎಂದಿತು
ಕಪಿ ಮತ್ತೊಂದು
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ .
(ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )
****

ವನಸುಮ ...

ವನಸುಮದೊಲೆನ್ನ ಜೀವನವು
ವಿಕಸಿಸುವಂತೆ ಮನವನನುಗೊಳಿಸು
ಗುರುವೇ ಹೇ ದೇವ
ಜನಕೆ ಸಂತಸನೀವ ಘನನು
ನಾನೆಂದೆಂಬ ಎಣಿಕೆ ತೋರದೆ
ಜಗದ ಪೊಗಳಿಕೆಗೆ ಬಾಯ್ಬಿಡದೆ
ಕಾನನದಿ ಮಲ್ಲಿಗೆಯು ಮೌನದಿ೦
ಬಿರಿದು ನಿಜಸೌರಭವನು ಸೂಸಿ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನು ತೊರೆದು ಕೃತಕೃತ್ಯತೆಯನು ಪಡೆವಂತೆ
ಉಪಕಾರಿ ತಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾದಪದಂತೆ
ನೈಜಮಾದೊಳ್ಪಿನಿ0 ಬಾಳ್ವವೊಲು

(ಕವಿ: ಡಿ.ವಿ.ಜಿ .)
***