Saturday, September 6, 2008

ಜೇಡ ಮತ್ತು ನೊಣ ..




ಬಾ ನೊಣವೆ ಬಾ ನೊಣವೆ ಬಾ ನನ್ನ ಮನೆಗೆ
ಬಾನಿನೊಳು ಹಾರಿ ಬಲು ದಣಿವಾಯಿತೆ ನಿನಗೆ
ನೀನೊಮ್ಮೆ ಬಾ ನನ್ನ ಹೊಸಮನೆಯ ನೋಡು
ಈ ನೂಲಿನ ಚಾಪೆಯಲಿ ಬಂದು ಕೂಡು
ಆ ಮಾತಿಗಾ ನೊಣವು ಎಲೆ ಜೇಡ ಜೇಡ
ಈ ಮನೆಯೊಳುಪಚಾರ ಹಾ ಬೇಡ ಬೇಡ
ನೀ ಮಾಡಿದಾ ಚಾಪೆ ನನಗೊಂದು ದೂಪೆ
ಆ ಮರದ ತೂತು ಮನೆ ಇದೆ ಅಲ್ಲಿ ಪೋಪೆ
ಎಲೆ ನೊಣವೆ ನಿನ್ನ ತಿರುಗಾಟ ನೋಡಿ
ತಲೆ ತಿರುಗುತಿದೆ ಬಾರೋ ದಯಮಾಡಿ
ಎಲೆಯ ಹಾಕಿರುವೆ ನೀನುಂಡು ಸುಖಿಯಾಗು
ಮಲಗು ಎಳೆ ಹಾಸಿನಲಿ ಬಳಿಕೆದ್ದು ಹೋಗು
ನಿನ್ನಲ್ಲಿ ಉಂಡವನು ಬೇರೆ ಬಾಳುವನೇ
ನಿನ್ನಲ್ಲಿ ಮಲಗಿದವ ಮತ್ತೆ ಎಳುವನೆ
ನಿನ್ನ ಕಥೆಯನು ಹಿರಿಯರಿಂ ಕೇಳಿ ಬಲ್ಲೆ
ನಿನ್ನಲ್ಲಿ ಬರಲೊಲ್ಲೆ ನಾನು ಬರಲೊಲ್ಲೆ
ಅರರೆ ನೊಣಗೊಂಬೆ ಮೈಗೊಂದ ನಿಂಬೆ
ಹರಿನೀಲ ಕಣ್ಗೊ೦ಬೆ ನೋಡಿ ಸೊಗಗೊಂಬೆ
ಗರಿ ಪಚ್ಚೆಯಲಿ ತುಂಬೆ ಆಹಾ ಹೊಸತುಂಬೆ
ಸ್ವರವು ಝೇ೦ ಝೇ೦ ಎಂಬೆ ಮಧುರವನು ತುಂಬೆ
ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ
ಬೀಳೆ ಕಿವಿಯಲಿ ಮಾತು ನೊಣವುಬ್ಬಿತ೦ತೆ
ಆಳ ನೋಡದ ಮಡುವಿನಲಿ ಧುಮುಕುವಂತೆ
ಬೋಳು ತಲೆ ನೊಣವು ಬಲೆಯಲಿ ಹಾರಿತಂತೆ
ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆ ನೊಣ ಮೈಯೇರಿ ಮುಳ್ಳುಗಳ ತೂರಿ
ಚಿಳ್ಳೆ೦ದು ವಿಷಕಾರಿ ನೆತ್ತರನು ಹೀರಿ
ಕೊಳ್ಳೆ ಹೊಡೆಯಲು ನೊಣವು ಸತ್ತಿತೈ ಚೀರಿ
(ಕವಿ : ಪಂಜೆ ಮಂಗೇಶರಾಯರು )
***
( ಈ ಹಾಡಿನ ಪೂರ್ಣ ಪಾಠವನ್ನು ಒದಗಿಸಿದ ಶ್ರೀ ರಾಜಕುಮಾರ್ ಮತ್ತು ಶ್ರೀ ನಾರಾಯಣ ಗಟ್ಟಿ ಯವರಿಗೆ ಕೃತಜ್ಞತೆಗಳು)

ಬಾರೆ ಹೋಗುವ ಸಾಗುವ ....

ನಮ್ಮ ಊರಿನ
ಜಾತ್ರೆ ಈ ದಿನ
ಬಾರೆ ಹೋಗುವ ಸಾಗುವ !
ಅಮ್ಮ ಬರುವಳು
ಅಕ್ಕ ಬರುವಳು
ಬಾರೆ ಹೋಗುವ ಸಾಗುವ !
ಅಪ್ಪ ಬರುವನು
ಅಣ್ಣ ಬರುವನು
ಬಾರೆ ಹೋಗುವ ಸಾಗುವ !
ತಮ್ಮ ಬರುವನು
ತಂಗಿ ಬರುವಳು
ಬಾರೆ ಹೋಗುವ ಸಾಗುವ !
ಮಾವ ಬರುವನು
ಬಾವ ಬರುವನು
ಬಾರೆ ಹೋಗುವ ಸಾಗುವ !
ದುಡ್ಡು ಕೊಡುವರು
ಲಡ್ಡು ಕೊಡುವರು
ಬಾರೆ ಹೋಗುವ ಸಾಗುವ !!
(ಕವಿ : ಹೊನ್ನಯ್ಯ ಶೆಟ್ಟಿ )
***

Friday, September 5, 2008

ಬೆಣ್ಣೆ ಕದ್ದ ನಮ್ಮ ಕೃಷ್ಣ ..

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ
ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಳಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು ಬೆಚ್ಚಿದ ರಾಧೆಯ ಗಂಡನಮ್ಮ
ತಾಯಿ ಬಂದಳೋಡಿ , ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು
ಆದಳು ಅರೆಚಣ ಭೀಕರ ತಾಳಿ ದುರುದುರು ಕಣ್ಣಿಟ್ಟು
ಹಣೆ ತುಂಬ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ ಅರಳಿತು ಕೆಂದುಟಿ ತುಂಟನ ನೋಟಕ್ಕೆ
ತಪ್ಪಿದ ದಂಟಕೆ ನಿಟ್ಟುಸಿರೆಳೆದ ಬೆಣ್ಣೆಗಳಾ ನೀಲಾ
ತಟ್ಟನೆ ಅಳುವುದ ನಿಲ್ಲಿಸಿ ಬಾಯಗಲಿಸಿ ಬಾಲ
ಹರಡಿದ ಬೆಳದಿಂಗಳ ಜಾಲ ಅರಳಿದ ಬೆಳದಿಂಗಳ ಲಾಲ
ಅವನ ಆ ಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರಾ
ಸಂತತ ನಗಿಸಲಿ ನಗದವರ
(ಕವಿ : ಕೆ. ಎಸ್ .ನಿಸಾರ್ ಅಹಮದ್ )
***

ಚಂದಿರನೇತಕೆ ಓಡುವನಮ್ಮ...

ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೆ?
ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೇ?
ಮಂಜಿನಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

(ಕವಿ :ನೀ . ರೆ. ಹೀರೇಮಠ )

****

Thursday, September 4, 2008

ಸಾರುತಿದೆ ಸೃಷ್ಟಿ

ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು !
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು !
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು !!
(ಕವಿ : ಕಾವ್ಯಾನಂದ )
****

Friday, August 29, 2008

ಹಕ್ಕಿ

ಪುಟ್ಟ ಪುಟ್ಟ ಹಕ್ಕಿ
ಪುಟಾಣಿ ಹಕ್ಕಿ
ಚಿಕ್ಕ ಕಣ್ಣಿನ ಹಕ್ಕಿ
ಸಣ್ಣ ಕೊಕ್ಕಿನ ಹಕ್ಕಿ
ಕಾಳು ತಿನ್ನುವ ಹಕ್ಕಿ
ನೀರು ಕುಡಿಯುವ ಹಕ್ಕಿ
ಮೇಲೆ ಹಾರೋ ಹಕ್ಕಿ
ಗೂಡು ಸೇರೋ ಹಕ್ಕಿ

ನೆಲದ ಕರೆ ..

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ
ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ
ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲ ಗಗನದಲಿ ತೇಲಿ ಹೋಗುತಿಹ
ನಿಮ್ಮನೆಳೆಯಬಹುದೆ ?
ಬಾಯುಂಟು ನನಗೆ ಕೂಗ ಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು
ಓ ಬನ್ನಿ ಬನ್ನಿ ಓ ಬನ್ನಿ ಬನ್ನಿ
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ
(ಕವಿ : ಜಿ. ಎಸ್ . ಶಿವರುದ್ರಪ್ಪ )

***